ನವದೆಹಲಿ (ಪಿಟಿಐ): ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಭಯೋತ್ಪಾದಕರಾದ ಹಫೀಜ್ ಸಯೀದ್ ಮತ್ತು ಝಕಿ ಉರ್ ರೆಹಮಾನ್ ಲಖ್ವಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪಾಕಿಸ್ತಾನಕ್ಕೆ ಸೂಚಿಸಲು ಭಾರತ ಚಿಂತನೆ ನಡೆಸಿದೆ.
ಈ ಮೂವರ ಹೆಸರನ್ನು ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ ಕೈದಾ ಹಾಗೂ ತಾಲಿಬಾನ್ ನಿರ್ಬಂಧ ಸಮಿತಿಯು ತನ್ನ ಪಟ್ಟಿಯಲ್ಲಿ ನಮೂದಿಸಿದ್ದು, ಅವರ ನಿರ್ಬಂಧವನ್ನೂ ವಿಧಿಸಿದೆ.
‘ಈ ಮೂವರ ಆಸ್ತಿಯನ್ನು ಮುಟ್ಟುಗೋಲು ಹಾಕುವುದು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಿ ಪಾಕಿಸ್ತಾನದ ಜವಾಬ್ದಾರಿ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೋ ಇಲ್ಲವೋ ಎಂಬುದನ್ನು ಅರಿಯುವ ಯತ್ನವಾಗಿ ಪಾಕಿಸ್ತಾನಕ್ಕೆ ಅಧಿಕೃತ ಮನವಿಯೊಂದನ್ನು ಕಳುಹಿಸುವ ಯೋಚನೆಯಿದೆ. ಒಂದು ವೇಳೆ ಮುಟ್ಟುಗೋಲು ಹಾಕಿಲ್ಲ ಎಂದಾದರೆ ಹಾಕುವಂತೆ ಮನವಿ ಕೋರಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾವೂದ್ ಇಬ್ರಾಹಿಂ, ಸಯೀದ್ ಮತ್ತು ಲಖ್ವಿ ಪಾಕಿಸ್ತಾನದಲ್ಲಿದ್ದಾರೆ ಎಂದು ಕೆಲವು ಖಾಸಗಿ ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.