ADVERTISEMENT

ಪಾಕಿಸ್ತಾನದಲ್ಲಿ ಮತ್ತೊಬ್ಬ ಭಾರತೀಯನ ಬಂಧನ

ಪಿಟಿಐ
Published 21 ಮೇ 2017, 18:25 IST
Last Updated 21 ಮೇ 2017, 18:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ಇಸ್ಲಾಮಾಬಾದ್‌ :ಪ್ರಯಾಣ ಹಾಗೂ ವೀಸಾ ದಾಖಲೆ ಇಲ್ಲದೇ ಬಂದ ಭಾರತೀಯನನ್ನು ಬಂಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
 
ಮುಂಬೈನ  ಪೂರ್ವ ಜೋಗೇಶ್ವರಿ ನಿವಾಸಿ ಶೇಕ್‌ ನಬಿ ಅಹ್ಮದ್‌ ಬಂಧಿತ ವ್ಯಕ್ತಿ.  ಮೇ 19ರಂದು ಯಾವುದೇ ದಾಖಲೆ ಒದಗಿಸಲು ವಿಫಲರಾಗಿದ್ದರಿಂದ ಅವರನ್ನು ಬಂಧಿಸಲಾಯಿತು ಎಂದು ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.
 
ಇಲ್ಲಿನ ಸೆಕ್ಟರ್‌ ಎಫ್‌–8ರ ನಜೀಮುದ್ದೀನ್‌ ರಸ್ತೆಯಲ್ಲಿರುವ ತೆರಳುತ್ತಿದ್ದ ಭಾರತೀಯನನ್ನು ತಪಾಸಣಾ ಕೇಂದ್ರದಲ್ಲಿ ವಿಚಾರಣೆ ನಡೆಸಲಾಯಿತು. ಈ ವೇಳೆ ಭಾರತೀಯನೆಂದು ಅವರು ತಿಳಿಸಿದ್ದು, ಪ್ರಯಾಣದ ಯಾವುದೇ ದಾಖಲೆ ಒದಗಿಸಲು ವಿಫಲರಾಗಿದ್ದರಿಂದ  ಪೊಲೀಸರು ವಶಕ್ಕೆ ಪಡೆದರು’ ಎಂದು ಪತ್ರಿಕೆಯು ವರದಿ ಮಾಡಿದೆ.
 
ಅಕ್ರಮವಾಗಿ ಪ್ರವೇಶಿಸಿ ದೇಶದಲ್ಲಿ ನೆಲೆಸಿದ್ದ ಆರೋಪದ ಮೇಲೆ ಬಂಧಿತರ ವಿರುದ್ಧ ವಿದೇಶಿ ಕಾಯ್ದೆ 1946ರ  ಅಡಿಯಲ್ಲಿ ದೂರು ದಾಖಲಿಸಲಾಗಿದ್ದು,  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
 
ಮಾಹಿತಿ ಇಲ್ಲ: ಭಾರತೀಯನ ಬಂಧಿಸಲ್ಪಟ್ಟ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ ಎಂದು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
 
‘ಭಾರತದ ನಿಲುವು ಸರಿಯಲ್ಲ’: ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ಜಯ ಸಿಕ್ಕಿದೆ ಎಂಬುದಾಗಿ ಭಾರತ ಬೀಗುವುದು ತಪ್ಪು ಎಂದು ಪ್ರಕರಣದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿರುವ ವಕೀಲ ಖಾವರ್ ಖುರೇಷಿ ಅವರು ಹೇಳಿದ್ದಾರೆ.
 ಪ್ರಕರಣದಲ್ಲಿ ಇದು ಕೇವಲ ಕಾರ್ಯವಿಧಾನ ಕ್ರಮವಷ್ಟೇ ಎಂದಿರುವ ಅವರು, ಇದರಲ್ಲಿ ಕಾನೂನಿಗಿಂತ ಮಿಗಿಲಾಗಿ ರಾಜಕೀಯ ಲಾಭವೇ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
****
‘ಕ್ಯಾಪ್ಟನ್ ಕಾಲಿಯಾ ಪ್ರಕರಣ ಐಸಿಜೆಗೆ ಕೊಂಡೊಯ್ಯಿರಿ’
(ಧರ್ಮಶಾಲಾ ವರದಿ):
ಕ್ಯಾಪ್ಟನ್ ಸೌರಭ್ ಕಾಲಿಯಾ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಕೊಂಡೊಯ್ಯುವಂತೆ ಹಿಮಾಚಲ ಪ್ರದೇಶ ನಿವೃತ್ತ ಸೈನಿಕರ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಕಾಲಿಯಾ ಅವರನ್ನು ಸೆರೆಹಿಡಿದಿದ್ದ ಪಾಕಿಸ್ತಾನಿ ಸೈನಿಕರು, ಅವರಿಗೆ ಚಿತ್ರಹಿಂಸೆ ನೀಡಿ ಬಳಿಕ ಅವರ ದೇಹದ ಕೆಲವು ಭಾಗಗಳನ್ನು ಭಾರತಕ್ಕೆ ಹಸ್ತಾಂತರಿಸಿದ್ದರು.  ಜಾಧವ್ ಪ್ರಕರಣದ ರೀತಿಯಲ್ಲೇ ಕಾಲಿಯಾ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಸಮಿತಿ ಮುಖ್ಯಸ್ಥ ನಿವೃತ್ತ ಮೇಜರ್ ವಿಜಯ್ ಸಿಂಗ್ ಮಂಕೊಟಿಯಾ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.