ಕರಾಚಿ: ಇಲ್ಲಿನ ದಕ್ಷಿಣದ ಸಿಂಧ್ ಪ್ರಾಂತ್ಯದಲ್ಲಿರುವ ಥಾಟ ಜಿಲ್ಲೆಯ ಘಾರೋ ನಗರದಲ್ಲಿರುವ ಹಿಂದೂ ದೇವಾಲಯವನ್ನು ಕೆಲವು ಅಪರಿಚಿತರು ತಡರಾತ್ರಿ ಧ್ವಂಸಗೊಳಿಸಿದ್ದು, ದೇವರ ಮೂರ್ತಿಗಳಿಗೆ ಹಾನಿ ಮಾಡಿದ್ದಾರೆ.
ಈ ಸಂಬಂಧ ಮೂವರು ಅಪರಿಚಿತರ ವಿರುದ್ಧ ಭಯೋತ್ಪಾದನೆ ಹಾಗೂ ಧರ್ಮನಿಂದನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಕಿಡಿಗೇಡಿಗಳು ದೇವಾಲಯವನ್ನು ನಾಶಗೊಳಿಸುವ ಸಮಯದಲ್ಲಿ ದೇವರ ವಿಗ್ರಹಕ್ಕೂ ಹಾನಿ ಮಾಡಿದ್ದಾರೆ. ಅಲ್ಲದೇ ಈ ವೇಳೆ ಮೂರ್ತಿಯ ಕೆಲವು ಭಾಗಗಳು ಮುರಿದುಹೋಗಿವೆ. ಘಟನೆ ಸಂಬಂಧ ಪೊಲೀಸರು ಈಗಾಗಲೇ ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ.
ದೇವಾಲಯದ ಬಳಿ ಒಬ್ಬ 12 ವರ್ಷದ ಬಾಲಕ ಓಡಾಡಿರುವ ಪಾದದ ಗುರುತುಗಳು ಸಿಕ್ಕಿವೆ. ಆದರೆ ಈ ಸಂಬಂಧ ಯಾರನ್ನೂ ಈವರೆಗೆ ಬಂಧಿಸಿಲ್ಲ’ ಎಂದು ಪೊಲೀಸ್ ಅಧಿಕಾರಿ ಹುಸೇನ್ ಮಸ್ತೋಯ್ ಅವರು ಹೇಳಿದ್ದಾರೆ.
ರಾತ್ರಿ ಸುಮಾರು 1 ಗಂಟೆಯಿಂದ ಬೆಳಗ್ಗೆ 5 ಗಂಟೆ ವೇಳೆ ದೇವಾಲಯದೊಳಗೆ ಅಪರಿಚಿತರು ಪ್ರವೇಶಿಸಿರುವ ಸಾಧ್ಯತೆ ಇದೆ. ಕೆಲವು ಭಕ್ತರು ಪ್ರಾರ್ಥನೆಗೆಂದು ಬೆಳಗ್ಗೆ ದೇವಾಲಯ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ ಎಂದು ಸ್ಥಳೀಯ ಪುರಸಭಾ ಸದಸ್ಯ ಲಾಲ್ ಮೇಹೇಶ್ವರಿ ತಿಳಿಸಿದ್ದಾರೆ. ಘಾರೋ ಪ್ರದೇಶ ಕರಾಚಿಯಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಇಲ್ಲಿ 2000 ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ನೆಲೆಸಿವೆ.