ಹಿಂದೆ ಅರುಣಾಚಲ ಪ್ರದೇಶದಲ್ಲಿ ನನ್ನ ಪತಿ ನರಸಿಂಹಮೂರ್ತಿಯವರು ಸಿವಿಲ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ, ಮೂರು ವರ್ಷಗಳ ಕಾಲ ಬೆಂಗಳೂರಿಗೆ ವರ್ಗಾವಣೆಯಾಯಿತು.
ಬಹಳ ದಿನಗಳಿಂದ ಸ್ವಗೃಹವನ್ನು ನಿರ್ಮಿಸಿಕೊಳ್ಳುವ ಹಂಬಲವನ್ನು ಈಡೇರಿಸಿಕೊಳ್ಳುವ ಸುಸಂದರ್ಭವೂ ಒದಗಿ ಬಂದಿತ್ತು. ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಕೊಂಡಿದ್ದ ನಿವೇಶನದಲ್ಲಿ ಮನೆ ಕಟ್ಟುವ ಪ್ರಯತ್ನ ಮಾಡಿದೆವಾದರೂ ಆಸೆ ಕೈಗೂಡಲಿಲ್ಲ.
ಶಿಮ್ಲಾಕ್ಕೆ ವರ್ಗಾವಣೆಯಾಗುವ ಕಾಲ ಸಮೀಪಿಸುತ್ತಿತ್ತು. ಕುಲದೈವ ಶ್ರೀಲಕ್ಷ್ಮೀ ನರಸಿಂಹಸ್ವಾಮಿಯ ಭಕ್ತರಾಗಿದ್ದ ನನ್ನ ಪತಿ, ಲೇಪಾಕ್ಷಿ ಬಳಿಯಿರುವ ಚಿಲಮತ್ತೂರು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಕ್ಷೇತ್ರಕ್ಕೆ ತೆರಳಿ, ದೇವರಿಗೆ ಸೇವೆ ಸಲ್ಲಿಸಬೇಕೆಂದು ಸಂಕಲ್ಪ ಮಾಡಿಕೊಂಡರು. ನನ್ನ ಅತ್ತೆಯ ಮನೆಯವರ ಬಳಗದವರನ್ನು ಕರೆದುಕೊಂಡು, ಮಕ್ಕಳೊಂದಿಗೆ ಹೊರಟೆವು.
ಅಲ್ಲಿ ಒಂದು ದಿನ ತಂಗಿದ್ದು, ಸ್ವಾಮಿಗೆ ಪೂಜಾ ಉತ್ಸವಗಳ ಸೇವೆ ಸಲ್ಲಿಸಿದೆವು. ಪ್ರಸಾದದ ಹೂಗಳೊಡನೆ ಸ್ವಾಮಿಯ ಬೆಳ್ಳಿಯ ಕಣ್ಣು, ಕೈಗಳು ಬಂದವು! ನನ್ನ ಪತಿಗೆ ಗಾಬರಿಯಾಗಿ, ಅರ್ಚಕರಿಗೆ ತಿಳಿಸಿದಾಗ, ಅವರು ನಿಮ್ಮ ಯಾವುದಾದರೂ ಸಂಕಲ್ಪವಿದ್ದರೆ, ಅದು ಈಡೇರುವ ಸೂಚನೆಯ ಫಲವಾಗಿ, ಸ್ವಾಮಿಯ ಕಣ್ಣು ಪ್ರಸಾದದೊಡನೆ ಬಂದಿರುವುದೆಂದು ತಿಳಿಸಿದರು. ಕೆಲವು ದಿನಗಳಲ್ಲಿಯೇ ಸಕಾಲಕ್ಕೆ ಎಚ್ಡಿಎಫ್ಸಿಯಿಂದ ಹಣ ದೊರೆತು, ನಮ್ಮ ಬಹಳ ದಿನಗಳ ಸ್ವಪ್ನ ಸೌಧ ವಾಸ್ತವವಾಗಿ ಮೈದಾಳಿತು. ಕುಲದೈವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಕೃಪಾ ಕಟಾಕ್ಷದ ಪರಿಧಿಯಲ್ಲಿ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ರೂಪುಗೊಂಡ ನಮ್ಮ ನಿವಾಸಕ್ಕೆ ‘ಶ್ರೀಲಕ್ಷ್ಮೀನರಸಿಂಹ ನಿಲಯ’ ಎಂದೇ ಹೆಸರಿಟ್ಟೆವು.
*
(ನಿಮ್ಮ ಮನೆ ಹೆಸರಿನ ಕಥೆಯನ್ನೂ ತಿಳಿಸಿ. ವಾಟ್ಸ್ಆ್ಯಪ್– 9513322931)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.