ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರದಲ್ಲಿ ಅತಿ ಹೆಚ್ಚು ಸಂಖ್ಯೆಯ ರೈಲ್ವೆ ಸಚಿವರನ್ನು ಹೊಂದಿದ ಹೆಗ್ಗಳಿಕೆ ಕರ್ನಾಟಕದ್ದು. ಎಚ್.ಸಿ. ದಾಸಪ್ಪ, ಸಿ. ಎಂ. ಪೂಣಚ್ಚ, ಕೆಂಗಲ್ ಹನುಮಂತಯ್ಯ, ಟಿ.ಎ. ಪೈ, ಜಾರ್ಜ್ ಫರ್ನಾಂಡಿಸ್, ಸಿ.ಕೆ. ಜಾಫರ್ ಷರೀಫ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ನಂತರ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಅಧಿಕಾರವಹಿಸಿಕೊಂಡಿರುವ ಡಿ.ವಿ. ಸದಾನಂದಗೌಡ ಅವರು 8ನೆಯವರಾಗಿದ್ದಾರೆ. ಈ ಹಿಂದಿನ ಏಳು ಸಚಿವರೆಲ್ಲ ಜವಾಹರಲಾಲ್ ನೆಹರೂ ಪ್ರಣೀತ ಸಮಾಜವಾದಿ ಸಿದ್ಧಾಂತದ ಚೌಕಟ್ಟಿನಲ್ಲಿಯೇ ಕರ್ತವ್ಯ ನಿರ್ವಹಿಸಿದ್ದರು.
ಈಗ ಸದಾನಂದ ಗೌಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದ ಮೂಲಕ ಕಾಲ ಅಪವ್ಯಯ ಮಾಡದೇ ಭಾರತೀಯ ರೈಲ್ವೆಯಲ್ಲಿ ಸಂಪೂರ್ಣ ಸುಧಾರಣೆ ತರಲು ಹೊಸ ದಿಕ್ಕಿನಲ್ಲಿ ಆಲೋಚಿಸಿ ತುರ್ತಾಗಿ ಕಾರ್ಯೋನ್ಮುಖವಾಗಬೇಕಾಗಿದೆ. ರೈಲ್ವೆಗೆ ಆಧುನಿಕತೆಯ ಸ್ಪರ್ಶ ನೀಡಿ, ಪ್ರಯಾಣಿಕ ಸ್ನೇಹಿಯಾದ, ಸ್ವಚ್ಛ, ದಕ್ಷ ಮತ್ತು ಲಾಭದಾಯಕವಾಗಿ ರೈಲ್ವೆಯನ್ನು ಮುನ್ನಡೆಸಬೇಕಾಗಿದೆ.
‘ಪವಿತ್ರ ಹಸು’ವಿನಂತಿರುವ ಸರ್ಕಾರಿ ಸ್ವಾಮ್ಯದ ಇತರ ಉದ್ದಿಮೆಗಳಂತೆ ರೈಲ್ವೆ ಕೂಡ ನಷ್ಟದಲ್ಲಿದ್ದು, ಅದಕ್ಕೊಂದು ಹೊಸ ರೂಪ ನೀಡುವ ನಿಟ್ಟಿನಲ್ಲಿ ಸದಾನಂದಗೌಡರು ದೃಢ ನಿಲುವು ತಳೆಯಬೇಕಾಗಿದೆ.
ರೈಲ್ವೆ ಬಜೆಟ್ನಲ್ಲಿ ಪ್ರಯಾಣ ದರ ಹೆಚ್ಚಿಸಿರುವುದನ್ನು ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಸಹಜವಾಗಿಯೇ ವಿರೋಧಿಸಿವೆ. ರೈಲ್ವೆ ಪ್ರಯಾಣ ದರ, ತೈಲೋತ್ಪನ್ನಗಳ ಬೆಲೆ ಏರಿಕೆ ಸಂದರ್ಭಗಳಲ್ಲಿ ಈ ಹಿಂದೆ ವಿರೋಧ ಪಕ್ಷವಾಗಿದ್ದ ಬಿಜೆಪಿಯೂ ಇದೇ ರೀತಿ ವರ್ತಿಸಿತ್ತು. ಪ್ರತಿಯೊಂದನ್ನೂ ವಿರೋಧಿಸುವುದೇ ಪ್ರತಿಪಕ್ಷಗಳ ಕೆಲಸ ಆಗಿರುತ್ತದೆ.
ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಯಾವುದೇ ಒಂದು ಉದ್ದಿಮೆ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದ್ದರೆ, ಅದನ್ನು ಮರಳಿ ಲಾಭದ ಹಾದಿಗೆ ತರಲು
ವಹಿವಾಟಿನ ಸ್ವರೂಪವನ್ನೇ ಬದಲಿಸಬೇಕಾಗುತ್ತದೆ. ಹೊಸ ತಂತ್ರಜ್ಞಾನ, ಆಲೋಚನೆ, ದಕ್ಷತೆ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಮಾತು ಭಾರತೀಯ ರೈಲ್ವೆಗೂ ಅನ್ವಯಿಸುತ್ತದೆ. ನಷ್ಟ ಸರಿದೂಗಿಸಲು ಪ್ರಯಾಣದರ ಹೆಚ್ಚಿಸಬೇಕಾಗುತ್ತದೆ. ಸರ್ಕಾರದ ಬೊಕ್ಕಸದ ನೆರವನ್ನೇ ನೆಚ್ಚಿಕೊಂಡರೆ ವಿತ್ತೀಯ ಕೊರತೆ ಇನ್ನಷ್ಟು ಹೆಚ್ಚುತ್ತದೆಯಲ್ಲದೇ ಜತೆಗೆ ಹಣದುಬ್ಬರಕ್ಕೂ ಕಾರಣವಾಗುತ್ತದೆ. ರೈಲ್ವೆ ಕೂಡ ನಿಜವಾಗಿಯೂ ನಷ್ಟಪೀಡಿತವಾಗಿದ್ದರೂ ಅದಕ್ಕೆ ಕೇಂದ್ರ ಸರ್ಕಾರದ ನಿರಂತರ ಪೋಷಣೆ ಮತ್ತು ನೆರವು ಇದ್ದೇ ಇದೆ. ಹೀಗಾಗಿ ಅದು ನಷ್ಟದಿಂದ ಹೊರಬರಲು ಹೊಸ ದಿಕ್ಕಿನತ್ತ ಆಲೋಚನೆಯನ್ನೇ ಮಾಡುತ್ತಿಲ್ಲ.
ಸಮಾನ ಆಸಕ್ತಿಗಳ ಉದ್ಯಮಿಗಳು ಅಧಿಕಾರದಲ್ಲಿ ಇರುವ ಸರ್ಕಾರಿ ಪ್ರಭುತಿಗಳ ಜತೆ ಸೇರಿಕೊಂಡು ಅಮೂಲ್ಯ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡು ಗರಿಷ್ಠಲಾಭ ಬಾಚಿಕೊಳ್ಳುತ್ತಾರೆ. ಈ ಬಗೆಯಲ್ಲಿ ಅಕ್ರಮ ಮಾರ್ಗಗಳ ಮೂಲಕ ಗಳಿಸಿದ ಅಪಾರ ಪ್ರಮಾಣದ ಹಣವನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ತಮ್ಮ ನಿಯಂತ್ರಣದಲ್ಲಿಯೇ ಇರಿಸಿಕೊಳ್ಳಲು ಬಳಸುತ್ತಾರೆ. ಈ ಮೂಲಕ ತೆರಿಗೆ ನೀತಿ ಮತ್ತು ಕೈಗಾರಿಕಾ ನಿಯಮಗಳನ್ನು ತಮಗೆ ಅನುಕೂಲಕರವಾಗುವ ಬಗೆಯಲ್ಲಿ ತಿರುಚುವಂತೆ ಮಾಡಿ ಸಾರ್ವಜನಿಕ ಹಿತಾಸಕ್ತಿಯನ್ನೇ ಬಲಿಕೊಡುತ್ತಾರೆ. ಕೆಲವೇ ಕೆಲವು ಪ್ರಭಾವಿಗಳು ಸೇರಿಕೊಂಡು, ಇಲ್ಲವೇ ಒಕ್ಕೂಟ ರಚಿಸಿಕೊಂಡು ಇಂತಹ ಮಸಲತ್ತುಗಳನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಹೊಸಬರು ತಮ್ಮ ಸಾಮ್ರಾಜ್ಯದಲ್ಲಿ ಪ್ರವೇಶಿಸದಂತೆಯೂ ನೋಡಿಕೊಳ್ಳುತ್ತಾರೆ.
ಈ ಬಗೆಯ ಬಂಡವಾಳಶಾಹಿ ಒಕ್ಕೂಟದಂತೆ ಸಮಾಜವಾದ ಕೂಟವೂ ಹಾನಿಕಾರಕವೇ. ಬಡವರಿಗೆ ನೆರವಾಗುವ ಸಿದ್ಧಾಂತದ ಹೆಸರಿನಲ್ಲಿ ಇಲ್ಲಿ ಸಂಪನ್ಮೂಲಗಳನ್ನು ಸಬ್ಸಿಡಿ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಅಧಿಕಾರದಲ್ಲಿ ಇರುವವರು ಈ ಸಂಪತ್ತನ್ನು ಸರ್ಕಾರಿ ಸ್ವಾಮ್ಯದ ನಿಗಮ- ಮಂಡಳಿಗಳ ಮೂಲಕ ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಳ್ಳುತ್ತಾರೆ. ಇಂತಹ ಸಂಘಟನೆಗಳಿಗೆ ತಮ್ಮ ಭಟ್ಟಂಗಿಗಳನ್ನೇ ನೇಮಿಸುತ್ತಾರೆ.
ಬಡವರ ಹೆಸರಿನಲ್ಲಿ ಪ್ರತಿಯೊಂದನ್ನೂ ಸಮರ್ಥಿಸಿಕೊಳ್ಳುತ್ತಲೇ ಸಮಾನತೆಯ ಸಮಾಜ ನಿರ್ಮಾಣದ ಖೊಟ್ಟಿ ಕನಸು ಬಿತ್ತುತ್ತಾರೆ. ಸಬ್ಸಿಡಿ ವಿತರಣೆ ಮತ್ತು ಗುತ್ತಿಗೆ ಖರೀದಿ ಹೆಸರಿನಲ್ಲಿ ಸರ್ಕಾರದ ಹಣವನ್ನು ನಿರಂತರವಾಗಿ ಕಬಳಿಸುತ್ತಲೇ ಇರುತ್ತಾರೆ.
ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದಂತೆ ಭಾರತೀಯ ರೈಲ್ವೆಯಲ್ಲಿಯೂ ಕೆಲವೇ ಕೆಲ ಉದ್ಯೋಗಿಗಳ ಹಿತಾಸಕ್ತಿ ರಕ್ಷಣೆಗಾಗಿ ನೂರು ಕೋಟಿ ಜನರ ಕಲ್ಯಾಣ ಮತ್ತು ದೇಶದ ಹಿತಾಸಕ್ತಿಯನ್ನೇ ಒತ್ತೆ ಇಡಲಾಗಿದೆ.
ರೈಲ್ವೆಯನ್ನು ನಿಜಕ್ಕೂ ದಕ್ಷ, ಲಾಭದಾಯಕ ಮತ್ತು ಜಾಗತಿಕ ಮಟ್ಟಕ್ಕೆ ಎತ್ತರಿಸುವ ಅನಿವಾರ್ಯತೆ ಈಗ ಉದ್ಭವಿಸಿದೆ. ಸಚಿವರೇ ಹೇಳುವಂತೆ ಭಾರತೀಯ ರೈಲ್ವೆ ಸದ್ಯಕ್ಕೆ ಕುಂಟುತ್ತಲೇ ಸಾಗಿದೆ.
ವಿಶ್ವದಲ್ಲಿನ ರೈಲ್ವೆ ಅಪಘಾತಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಪಘಾತಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿಯೇ ಇದೆ. ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳು ಕಲ್ಪನೆಗೆ ನಿಲುಕಲಾರದಷ್ಟು ಗಬ್ಬೆದ್ದು ಹೋಗಿವೆ. ಲಕ್ಷಾಂತರ ಪ್ರಯಾಣಿಕರನ್ನು ಸರಿಯಾಗಿ ನಿರ್ವಹಿಸಲಾರದೇ ಭಾರತೀಯ ರೈಲ್ವೆ ಬಸವಳಿದಿದೆ.
ಮೆಟ್ರೊ ರೈಲ್ವೆಯ ಶ್ರೀಧರನ್ ಅವರಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಕೇಂದ್ರೋದ್ಯಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಸದ್ಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ರೈಲ್ವೆಯಲ್ಲಿಯೂ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಲಾಭದಾಯಕತೆ ತರಬೇಕಾದರೆ ಇಂತಹ ದಕ್ಷ ಅಧಿಕಾರಿಗಳ ಸೇವೆ ಪಡೆಯಲು ರೈಲ್ವೆ ಮನಸ್ಸು ಮಾಡಬೇಕು.
ಚೀನಾ, 20 ವರ್ಷಗಳಲ್ಲಿ ದೇಶದಾದ್ಯಂತ ದಕ್ಷ, ಅತ್ಯಾಧುನಿಕ ಮತ್ತು ಗರಿಷ್ಠ ವೇಗದ ರೈಲ್ವೆ ಜಾಲವನ್ನು ನಿರ್ಮಾಣ ಮಾಡಿ ಜಪಾನ್ ಮತ್ತು ಕೊರಿಯಾಗಳನ್ನು ಹಿಂದಿಕ್ಕಿದೆ. ವಿಶ್ವದಾದ್ಯಂತ ಇರುವ ಗರಿಷ್ಠ ವೇಗದ ಒಟ್ಟು ರೈಲ್ವೆ ಮಾರ್ಗಕ್ಕಿಂತ ಚೀನಾದಲ್ಲಿನ ರೈಲ್ವೆ ಜಾಲದ ವ್ಯಾಪ್ತಿ ಹೆಚ್ಚಿಗೆ ಇದೆ. ರೈಲ್ವೆ ಮತ್ತು ನಿಲ್ದಾಣಗಳ ಸ್ವಚ್ಛತೆಯು ಯೂರೋಪ್ ಮತ್ತು ಪಶ್ಚಿಮದ ದೇಶಗಳಿಗಿಂತ ಉನ್ನತ ಮಟ್ಟದಲ್ಲಿ ಇದೆ.
ಟೀಕೆ ಮತ್ತು ಪ್ರತಿಭಟನೆಯನ್ನು ದಿಟ್ಟತನದಿಂದ ಎದುರಿಸುತ್ತಲೇ ಪ್ರಯಾಣ ದರ ಹೆಚ್ಚಿಸುವುದೇ ಎನ್ಡಿಎ ಸರ್ಕಾರದ ಮುಖ್ಯ ಗುರಿಯಾಗಿರಬಾರದು. ಒಟ್ಟಾರೆ ರೈಲ್ವೆಯ ಸಮಗ್ರ ಸ್ವರೂಪವನ್ನೇ ಬದಲಾಯಿಸಿ, ಖಾಸಗಿಯವರಿಗೆ ಅವಕಾಶ ಮಾಡಿಕೊಟ್ಟು ಗರಿಷ್ಠ ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ನಿಟ್ಟಿನಲ್ಲಿಯೂ ತುರ್ತಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ.
ಇಂತಹ ಪ್ರಯತ್ನಗಳನ್ನು ಅನೇಕ ಸ್ಥಾಪಿತ ಹಿತಾಸಕ್ತಿಗಳು ವಿರೋಧಿಸುತ್ತಲೇ ಇರುತ್ತವೆ. ತೆರಿಗೆದಾರರ ಹಣಕ್ಕೆ ನ್ಯಾಯ ಒದಗಿಸುವ ಪ್ರಯತ್ನಗಳಿಗೆ ಕಾರ್ಮಿಕ ಸಂಘಟನೆಗಳೇ ಅಡ್ಡಗಾಲು ಹಾಕುತ್ತವೆ.
ಯೂರೋಪ್ನಲ್ಲಿ ಅಗ್ಗದ ವಿಮಾನ ಯಾನ ಸೇವೆಯು ಈಗಾಗಲೇ ನಗರಗಳ ಮಧ್ಯೆ ಪರ್ಯಾಯ ಸಂಚಾರ ಮಾಧ್ಯಮವಾಗಿ ಜನಪ್ರಿಯತೆ ಪಡೆದುಕೊಂಡು ರೈಲ್ವೆಗಳಿಗೆ ಸವಾಲೊಡ್ಡಿದೆ. ಅಮೆರಿಕದಲ್ಲಿ ಜನರು ರೈಲ್ವೆ ಮೂಲಕ ಪ್ರಯಾಣಿಸುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ. ಭಾರತೀಯ ರೈಲ್ವೆ ಕೂಡ ಕಾಲಕ್ಕೆ ತಕ್ಕಂತೆ ಬದಲಾವಣೆ ಅಳವಡಿಸಿಕೊಳ್ಳದಿದ್ದರೆ ಜನರು ಅಗ್ಗದ ವಿಮಾನಗಳತ್ತ ಇನ್ನಷ್ಟು ಮುಖ ಮಾಡುವಂತಾದರೆ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.
ಭಾರತೀಯ ರೈಲ್ವೆ ತನ್ನ ಸ್ವಾಧೀನದಲ್ಲಿ ಇರುವ ಭೂಮಿಯನ್ನು ಸದ್ಬಳಕೆ ಮಾಡಿಕೊಳ್ಳಲು ಸೂಕ್ತ ಯೋಜನೆ ಹಮ್ಮಿಕೊಳ್ಳಬೇಕಾಗಿದೆ. ಷಾಪಿಂಗ್ ಮಾಲ್ ಮತ್ತು ಮನರಂಜನೆ ಉದ್ದೇಶಕ್ಕೆ ಈ ಭೂಮಿ ಬಳಸಿಕೊಂಡು ವರಮಾನ ವೃದ್ಧಿಸಬೇಕಾಗಿದೆ.
ಉದಾಹರಣೆಗೆ ಬೆಂಗಳೂರನ್ನೇ ತೆಗೆದುಕೊಂಡರೆ ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ಕಂಟೋನ್ಮೆಂಟ್, ಕೆ.ಆರ್. ಪುರ ನಿಲ್ದಾಣಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಆಧುನೀಕರಣಗೊಳಿಸಿ ವರಮಾನ ಹೆಚ್ಚಿಸುವ ವೈವಿಧ್ಯಮಯ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಾಗಿದೆ.
ಸದಾನಂದಗೌಡ ಅವರು ಮುಂದಿನ 5 ವರ್ಷಗಳ ಅವಧಿಯಲ್ಲಿ ಕನಿಷ್ಠ 100 ನಿಲ್ದಾಣಗಳನ್ನು ಈ ರೀತಿ ಆಧುನೀಕರಣಗೊಳಿಸಲು ಕಾರ್ಯತತ್ಪರರಾಗಬೇಕು.
ಖಾಸಗಿಯವರ ಪಾಲುದಾರಿಕೆಯ ನೆರವಿನಿಂದ ರೈಲ್ವೆಯ ಆಧುನೀಕರಣ ಮತ್ತು ಸುಧಾರಣಾ ಪ್ರಯತ್ನಗಳು ಸಮಾಜವಾದಿಗಳಂತೆ ಸಂಘ ಪರಿವಾರಕ್ಕೂ ಪಥ್ಯವಾಗುತ್ತಿಲ್ಲ.
ಕಾಂಗ್ರೆಸ್ನ ಜಡ್ಡುಗಟ್ಟಿದ ಧೋರಣೆಗಳಿಗೆ ಬದಲಾಗಿ ವ್ಯಾಪಕ ಬದಲಾವಣೆಯ ಭರವಸೆ ನೀಡಿರುವ ನರೇಂದ್ರ ಮೋದಿ ಅವರ ವರ್ಚಸ್ಸಿನಿಂದ ಪ್ರಭಾವಿತರಾದ ಮತದಾರರು ಬಿಜೆಪಿ ಗೆಲ್ಲಿಸಿದ್ದಾರೆ. ಹೀಗಾಗಿ ಮತದಾರರ ನಿರೀಕ್ಷೆಗಳು ಅಪಾರವಾಗಿವೆ. ಕಾಲ ಮಿಂಚುವ ಮೊದಲೇ ಸಚಿವ ಸದಾನಂದಗೌಡರು ತ್ವರಿತವಾಗಿ ಕಾರ್ಯಪ್ರವೃತ್ತವಾಗಿ ರೈಲ್ವೆಗೆ ಜೀವ ತುಂಬಿ ದೇಶದ ಹೆಮ್ಮೆಯ ಜೀವನಾಡಿಯಾಗುವಂತೆ ಮಾಡಬೇಕಾಗಿದೆ. ಇಲ್ಲದಿದ್ದರೆ ಪ್ರಯಾಣ ದರ ಹೆಚ್ಚಳದಂತಹ ಕಹಿ ಗುಳಿಗೆಗಳು ಬರೀ ರೋಗದ ಲಕ್ಷಣಗಳನ್ನಷ್ಟೇ ಗುಣಪಡಿಸಬಹುದೇ ಹೊರತು, ಕಾಯಿಲೆ ಗುಣಪಡಿಸಲು ನೆರವಾಗುವುದಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.