ದೇವನೂರ ಮಹಾದೇವ ಅವರ ಸರ್ವೋದಯ ಪಕ್ಷ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಘೋಷಿಸಿದೆ. ‘ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜಾಗುತ್ತಿದೆಯೇ?’ ಲೇಖನದಲ್ಲಿ (ಪ್ರ.ವಾ. ಏ.10) ಬಿಜೆಪಿ ಹಾಗೂ ಸಂಘ ಪರಿವಾರದ ಹುನ್ನಾರಗಳನ್ನು ಅವರು ಬಯಲಿಗೆಳೆದಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರವು ಕಳೆದ ಹತ್ತು ತಿಂಗಳಿಂದ ಮಾಡಿರುವ ಅನಾಹುತಗಳ ಬಗೆಗೆ ದೇವನೂರರು ದಿವ್ಯಮೌನ ವಹಿಸಿದ್ದಾರೆ.
ಈ ಸರ್ಕಾರದ ಅನೇಕ ಜನವಿರೋಧಿ ನೀತಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವ ಸಾಹಿತಿಗಳು, ಬುದ್ಧಿಜೀವಿಗಳು ಸಹಿಸಿಕೊಂಡು ಬರುತ್ತಿದ್ದಾರೆ. ಉದಾಹರಣೆಗೆ; 1) ರೈತರ ಅಹವಾಲುಗಳನ್ನು ಕೇಳದೆ, ಸಾವಿಗೆ ಕಾರಣವಾಗಿದ್ದು, - ಇತ್ತೀಚೆಗೆ ಅವರ ಸಾವಿಗೆ ಕುಡಿತ ಕಾರಣ ಎಂಬ ಹೇಳಿಕೆ ಸಿದ್ದರಾಮಯ್ಯನವರಿಂದ ಬಂದಿದೆ! 2) ರೈತರ ಮೇಲೆ ಅಮಾನವೀಯವಾಗಿ ಲಾಠಿ ಚಾರ್ಜ್ ಮಾಡಿರುವ ಕ್ರಮ 3) ರಾಜ್ಯದಾದ್ಯಂತ ನಡೆದ ವಿವಿಧ ಪ್ರತಿಭಟನೆಗಳ ಬಗೆಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ 4) ಅನುದಾನಿತ ಕಾಲೇಜುಗಳ ಉಪನ್ಯಾಸಕರ ಉಪವಾಸ ಸತ್ಯಾಗ್ರಹ 5) ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗಾಗಿ ನಡೆಸಿದ ಪ್ರತಿಭಟನೆ
6) ದಿನಗೂಲಿ ನೌಕರರ ಪ್ರತಿಭಟನೆ 7) ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗಳಲ್ಲದೆ ಮಾಜಿ ಮುಖ್ಯಮಂತ್ರಿಗಳ ಪ್ರತಿಭಟನೆಗಳೂ ಈ ಸರ್ಕಾರದ ಗಮನಸೆಳೆದಿಲ್ಲ. ಅಷ್ಟು ಈ ಸರ್ಕಾರ ಸಂವೇದನೆಯನ್ನು ಕಳೆದುಕೊಂಡಿದೆ. 8) ಕೃತಿ ನಿಷೇಧ, ಲೇಖಕರ ಬಂಧನ–ಕರ್ನಾಟಕದಲ್ಲಿ ಕೃತಿ ಬರೆದ ಕಾರಣಕ್ಕೆ ಬಂಧಿಸುವ ಕೆಟ್ಟ ಪರಂಪರೆಗೆ ಈ ಸರ್ಕಾರ ನಾಂದಿ ಹಾಡಿದೆ 9) ಸಾಂಸ್ಕೃತಿಕ ನೀತಿಯ ಹೇರಿಕೆ ಯತ್ನ 10) ಅಲ್ಪಸಂಖ್ಯಾತರಿಗೆ ಶಾದಿಭಾಗ್ಯ ಯೋಜನೆ 11) ‘ಅಹಿಂದ’ ಮಕ್ಕಳಿಗೆ ಮಾತ್ರ ಪ್ರವಾಸ ಭಾಗ್ಯ ಯೋಜನೆ ರೂಪಿಸಿ, ವಿರೋಧ ಬಂದಿದ್ದರಿಂದ ನಂತರ ವಿಸ್ತರಿಸಿದ್ದು– ಇತ್ಯಾದಿ ಅನಾಹುತಗಳು ನಡೆದಿವೆ. ಸಿದ್ದರಾಮಯ್ಯವರ ಅಧಿಕಾರಾವಧಿಯಲ್ಲಿ ನಡೆದಿರುವ ಅಹಿತಕರ ಘಟನೆಗಳು, ತಳೆದ ಜೀವವಿರೋಧಿ ನಿಲುವುಗಳ ಸಮಯದಲ್ಲಿ ಈಗ ಬಹಿರಂಗ ಪ್ರಚಾರಕ್ಕೆ ಬಂದಿರುವ ಸಾಹಿತಿಗಳು ಮೌನ ವಹಿಸಿದ್ದರು. ಅದನ್ನು ಪ್ರಜ್ಞಾವಂತರು ನಿಜಕ್ಕೂ ಪ್ರಶ್ನಿಸಬೇಕು.
ಕಳೆದ ಎರಡು ಸರ್ಕಾರಗಳು ಮಾಡಿದ ಕೆಟ್ಟ ಸಾಧನೆಯ ಪಟ್ಟಿಯನ್ನು ನೋಡಿದರೆ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಸರ್ಕಾರಗಳು ಏನು ಮಾಡಿದರೂ ಸುಮ್ಮನಿರುವ ವಿದ್ಯಾವಂತ ಮತದಾರರು ಒಂದು ಕಡೆ ಇದ್ದಾರೆ. ಇನ್ನೊಂದು ಕಡೆ ತಾವು ನಡೆದದ್ದೇ ಹಾದಿ, ಮಾಡಿದ್ದೇ ಕೆಲಸ, ಹಗರಣಗಳೇ ನಮ್ಮ ಸಾಧನೆಗಳು ಎಂಬಂತೆ ಅನೇಕ ರಾಜಕಾರಣಿಗಳು ಸಾಗಿದ್ದಾರೆ. ಹಾಗಾದರೆ ಈ ಅನಾಹುತಗಳನ್ನು ತಡೆಯುವವರಾರು? ಹೇಗೆ? ಇದಕ್ಕೆ ಕೊನೆ ಎಂದು? ಇಂತಹ ಅನೈತಿಕ ಚಟುವಟಿಕೆಗಳು ನಿರಂತರವೇ? ಇಂತಹ ಪ್ರಶ್ನೆಗಳು ಮೂಡುವುದು ಸಹಜ. ಇಂತಹ ಸಂದರ್ಭದಲ್ಲಿ ಸಾಹಿತಿ, ಬುದ್ಧಿಜೀವಿ, ಹೋರಾಟಗಾರರು ಕ್ರಿಯಾಶೀಲವಾಗಬೇಕಿದೆ.
ಭಾರತಕ್ಕೆ ಬ್ರಿಟಿಷರು ಬರುವವರೆಗೆ ವಿದ್ಯೆ ಬಹುತೇಕ ಉಳ್ಳವರ ಸ್ವತ್ತಾಗಿತ್ತು. ಅಲ್ಲದೆ ವಿದ್ಯೆಯನ್ನು ಹಂಚುವುದು, ವಿಸ್ತರಿಸುವುದು ಪ್ರಮಾದವೆಂಬಂತಹ ಭಾವನೆಗಳನ್ನು ಬಿತ್ತಲಾಗಿತ್ತು. ಇದರಿಂದಾಗಿ ಯಾರು ಏನು ಮಾಡಿದರೂ ನಡೆಯುತ್ತಿತ್ತು. ದುರದೃಷ್ಟವಶಾತ್ ಆಧುನಿಕ ಸಂದರ್ಭದಲ್ಲೂ ಇಂತಹದೇ ಮನೋಧರ್ಮವಿದೆ. ಇದರಿಂದಾಗಿ ಜನರಿಗೆ ಉತ್ತರದಾಯಿಗಳಾಗಬೇಕಾದ ರಾಜಕಾರಣಿ, ಅಧಿಕಾರಿಗಳು ಆರಾಮವಾಗಿ ಕುಳಿತಿದ್ದಾರೆ. ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ಕೊಲೆ ಮಾಡಿ ಜೈಲಿನಲ್ಲಿರಬೇಕಾದವರು ನಾಚಿಕೆಯಿಲ್ಲದೆ ಸಾರ್ವಜನಿಕವಾಗಿ ತಿರುಗಾಡಿಕೊಂಡಿದ್ದಾರೆ. ತಮ್ಮ ಜಾತಿಯವನು ಎಂಬ ಕಾರಣಕ್ಕೆ ಭ್ರಷ್ಟ, ಲಂಚಕೋರ, ಅತ್ಯಾಚಾರಿ, ಮತಾಂಧರನ್ನು ಬೆಂಬಲಿಸುವ ವರ್ಗವಿದೆ.
ಇದು ಹೀಗೆಯೇ ಎಷ್ಟು ದಿನ ಮುಂದುವರೆಯಬೇಕು? ಇಂತಹ ಪ್ರಶ್ನೆ ಈಗಿನದಲ್ಲ. ಕರ್ನಾಟಕದಲ್ಲಿ ಪ್ರಗತಿರಂಗದ ಪರಿಕಲ್ಪನೆಯನ್ನು ಪಿ. ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಎಸ್.ರಾಮದಾಸ್, ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ, ಚಂದ್ರಶೇಖರ ಪಾಟೀಲ ಮೊದಲಾದವರು ರಾಜಕೀಯ ಶಕ್ತಿಯಾಗಿಸಲು ಪ್ರಯತ್ನಿಸಿದರು. ರಾಜಕಾರಣದಲ್ಲಿ ಬದಲಾವಣೆಯನ್ನು ತರುವ ಇವರ ಪ್ರಯತ್ನದಲ್ಲಿ ಇಂದಿನ ದೆಹಲಿಯಲ್ಲಿ ನಡೆದ ಮ್ಯಾಜಿಕ್ ನಡೆಯದಿದ್ದರೂ, ಪ್ರೊ.ನಂಜುಂಡಸ್ವಾಮಿಯವರು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ಆದರೆ ಅನಂತರ ಈ ಪ್ರಯತ್ನ ವಿಫಲವಾಯಿತು. ಸಾಹಿತಿ, ಹೋರಾಟಗಾರರು, ಚಿಂತಕರು ಒಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವಲ್ಲಿ ವಿಫಲರಾದರು.
ಪ್ರಸ್ತುತ ರಾಜಕೀಯ ದುರಂತಕ್ಕೆ ಈ ಸೋಲು ಪ್ರಮುಖ ಕಾರಣವಾಗಿದೆ. ಚಿಲಿಯ ನೆರೂಡ, ಜರ್ಮನಿಯ ಬ್ರೆಕ್ಟ್, ಆಫ್ರಿಕಾದ ಗೂಗಿ ವಾ ಥಿಯಾಂಗೋ, ಕ್ಯೂಬಾದ ಚೆಗೆವಾರ ಮೊದಲಾದವರು ತೀವ್ರವಾಗಿ ರಾಜಕೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇಂದಿಗೂ ಅಮೆರಿಕದ ಕಟು ವಿಮರ್ಶಕ ನೋಮ್ಚಾಮ್ಸ್ಕಿ ರಾಜಕೀಯ ಸಿದ್ಧಾಂತಗಳನ್ನು ಒರೆಗೆ ಹಚ್ಚುವುದರಿಂದಲೇ ಪ್ರಸಿದ್ಧನಾದವನು. ಆದರೆ ಭಾರತದಲ್ಲಿ ಸಾಹಿತಿಗಳನ್ನು ಶುದ್ಧಾಂಗವಾಗಿ ಸಾಹಿತ್ಯವಲಯಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಆದ್ದರಿಂದಲೇ ಭಾರತದಲ್ಲಿ ಸಣ್ಣ ಬದಲಾವಣೆಗೂ ಸಾವಿರಾರು ವರ್ಷಗಳ ಸುದೀರ್ಘ ಹಾದಿಯನ್ನು ಕ್ರಮಿಸಬೇಕಾಗುತ್ತಿದೆ.
ಅದರೊಟ್ಟಿಗೆ ಸಾಹಿತಿಗಳು ಸಕ್ರಿಯ ರಾಜಕೀಯ ಪ್ರವೇಶದ ಬದಲು, ಕೇವಲ ಬೆಂಬಲಿಸುವ ಕೆಲಸಕ್ಕೆ ಸೀಮಿತವಾಗುತ್ತಿದ್ದಾರೆ. ವಿಚಾರಗಳು ಮನುಷ್ಯರನ್ನು ಆಳುತ್ತವೆ ಎಂಬ ಮಾತಿದೆ. ಆದರೆ ಬುದ್ಧಿಜೀವಿಗಳನ್ನು ಅನುಮಾನದಿಂದ ನೋಡುವ, ಅವರನ್ನು ಅವಮಾನಿಸುವ, ಅವರ ಬಗ್ಗೆ ಸಾರ್ವಜನಿಕವಾಗಿ ಅವಹೇಳನ ಮಾಡುವ ಕೆಲಸಗಳು ಇಲ್ಲಿ ನಡೆಯುತ್ತಿವೆ. ಇಂತಹ ಸಮಯದಲ್ಲಿ ಸಾಹಿತಿಗಳ ಮಾತುಗಳನ್ನು ಅಪವ್ಯಾಖ್ಯಾನಿಸುವ ಕೆಲಸ ಕೂಡ ನಡೆಯುತ್ತಿದೆ. ಇನ್ನು ಈ ದೇಶದ ಸಮಸ್ಯೆಗಳು ಬಗೆಹರಿಯುವುದೆಂತು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.