ADVERTISEMENT

ನಿಷೇಧ ಇರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಫೆಬ್ರುವರಿ 2016, 19:51 IST
Last Updated 3 ಫೆಬ್ರುವರಿ 2016, 19:51 IST

ಇದುವರೆಗೂ ಜಾರಿಯಲ್ಲಿರುವ ಭ್ರೂಣ ಲಿಂಗ ಪತ್ತೆ ನಿಷೇಧವನ್ನು ಪರಾಮರ್ಶಿಸಬೇಕೆಂಬ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಇಂಗಿತ ಒಪ್ಪತಕ್ಕುದಲ್ಲ. ಪುತ್ರ ವ್ಯಾಮೋಹ ಹೆಚ್ಚಿರುವ ನಮ್ಮ ದೇಶದಲ್ಲಿ ಇದನ್ನು ಜಾರಿಗೊಳಿಸಿದರೆ ಭ್ರೂಣ ಹೆಣ್ಣು ಎಂದು ತಿಳಿಯುತ್ತಿದ್ದಂತೆ ಹತ್ಯೆಗೆ ಮುಂದಾಗುವವರೇ ಜಾಸ್ತಿ. ಇದೇ ಕಾರಣಕ್ಕೆ ಅಲ್ಲವೇ ಅದನ್ನು ನಿಷೇಧಿಸಿದ್ದು? ಲಿಂಗಾನುಪಾತದ ವ್ಯತ್ಯಾಸಕ್ಕೆ ನಿಜವಾದ ಕಾರಣ ಹುಡುಕಿ, ಪರಿಹಾರಕ್ಕೆ ಮುಂದಾಗಬೇಕು.

ಹುಟ್ಟುವ ಹೆಣ್ಣು ಮಗುವಿಗೆ ಕರ್ನಾಟಕದ ‘ಭಾಗ್ಯಲಕ್ಷ್ಮಿ’ ಯೋಜನೆಯಂತೆ ಪ್ರೋತ್ಸಾಹಕ ಕ್ರಮಗಳನ್ನು ಕೇಂದ್ರವೂ ಜಾರಿಗೊಳಿಸಬೇಕು. ಇದು ಬಿಪಿಎಲ್ ಕುಟುಂಬಕ್ಕೆ ಮಾತ್ರವಿದ್ದು ಇದನ್ನು ಎಲ್ಲ ವರ್ಗಕ್ಕೂ ವಿಸ್ತರಿಸಬೇಕು. ಏಕೆಂದರೆ, ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗಿ ವಿದ್ಯಾವಂತರಿಂದಲೇ ನಡೆಯುತ್ತಿರುವುದು ಸಂಶೋಧನಾ ವರದಿಗಳಿಂದ ದೃಢಪಟ್ಟಿದೆ.

ವರ್ಷಕ್ಕೆ ಇಂತಿಷ್ಟು ಹಣವನ್ನು ಆ ಮಗುವಿನ ಖಾತೆಗೆ ಜಮಾ ಮಾಡಿ ಅವಳ ಉನ್ನತ ಶಿಕ್ಷಣಕ್ಕೆ ಇಲ್ಲವೇ ಅವಳ ಮದುವೆಯ ಸಂದರ್ಭಕ್ಕೋ ಉಪಯೋಗಿಸಲು ಅನುವಾಗಬೇಕು. ಆಗ ಹೆಣ್ಣು ಹೊರೆ ಎಂಬ ನಮ್ಮ ಮನೋಭಾವ ದೂರಾಗುವುದರ ಜೊತೆಗೆ ಭ್ರೂಣ ಹತ್ಯೆಗೂ ಅಂತ್ಯ ಹಾಡಬಹುದು. ಈ ನಿಟ್ಟಿನಲ್ಲಿ ಸಚಿವರ ನಿಜವಾದ ಕಾಳಜಿ ವ್ಯಕ್ತವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.