ಆ ಹುಡುಗನ ಹೆಸರು ಅನಿಕೇತನ. ಶಾಲೆಯೊಂದರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ. ವಿಜ್ಞಾನ ಮತ್ತು ಗಣಿತ ವಿಷಯಗಳ ಮನೆಪಾಠಕ್ಕಾಗಿ ಹತ್ತಿರದ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿಕೊಂಡಿದ್ದ. ಒಂದು ದಿನ ಶಾಲಾ ವಾಹನದಲ್ಲಿ ತೆರಳುವಾಗ ಜತೆಗಾರ ವಿದ್ಯಾರ್ಥಿಯೊಬ್ಬ ಆ ಕೋಚಿಂಗ್ ಸೆಂಟರ್ ಬಗ್ಗೆ ಅವನ ಅಭಿಪ್ರಾಯ ಕೇಳಿದ. ಆ ಕೇಂದ್ರದ ಗುಣಮಟ್ಟದ ಬಗ್ಗೆ ತನಗೆ ತೃಪ್ತಿ ಇಲ್ಲವೆಂದು ಅನಿಕೇತನ ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನೀಡಿದ. ಇದಿಷ್ಟೂ ವಿದ್ಯಾರ್ಥಿಗಳ ನಡುವೆ ಸಹಜವಾಗಿ ನಡೆದ ಸಂಭಾಷಣೆ.
ಅನಿಕೇತನನ ಈ ಅಭಿಪ್ರಾಯ ಮರುದಿನ ಅದ್ಹೇಗೋ ಕೋಚಿಂಗ್ ಸೆಂಟರಿನ ಮಾಲೀಕ– - ಶಿಕ್ಷಕನ ಕಿವಿ ತಲುಪಿದೆ. ಆಗ ಆ ಶಿಕ್ಷಕ ತನ್ನ ಕೇಂದ್ರ ಕುರಿತ ವಿದ್ಯಾರ್ಥಿಯ ಅಭಿಪ್ರಾಯವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಇಂತಹ ಆರೋಗ್ಯಕಾರಿ ಕ್ರಿಯೆ ಶಿಕ್ಷಕನ ವೃತ್ತಿ ನೈಪುಣ್ಯದ ಉನ್ನತೀಕರಣ ದೃಷ್ಟಿಯಿಂದ ಅಪೇಕ್ಷಣೀಯವೂ ಆಗಿತ್ತು.
ಆದರೆ ಆ ಶಿಕ್ಷಕನ ಮನೋಧರ್ಮವೇ ಬೇರೆ ಇತ್ತು. ಅನಿಕೇತನನ ವಸ್ತುನಿಷ್ಠ ಅಭಿಪ್ರಾಯವನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡ ಶಿಕ್ಷಕ ವಿದ್ಯಾರ್ಥಿಯ ಮೇಲೆ ವಿಪರೀತ ಕೋಪ ಮಾಡಿಕೊಂಡು ಇದು ತನಗೆ ಮಾಡಿದ ಅವಮಾನವೆಂದೇ ಬಗೆದ. ತರಗತಿಯಲ್ಲಿ ಈ ಬಗ್ಗೆ ಬಾಲಕನನ್ನು ನಿರೀಕ್ಷೆಯಂತೆ ಪ್ರಶ್ನಿಸಿದ. ಆಗ ಬಾಲಕ ಇಂತಹ ಮುಜುಗರದ ಸನ್ನಿವೇಶದಿಂದ ಪಾರಾಗಲು ತಾನು ಹಾಗೆ ಹೇಳೇ ಇಲ್ಲವೆಂದು ಸುಳ್ಳು ಉಸುರಬಹುದಿತ್ತು. ಆದರೆ ಬಾಲಕನ ಸ್ವಭಾವ ಮತ್ತು ಸಂಸ್ಕಾರ ಸುಳ್ಳಿನ ಆಶ್ರಯಕ್ಕೆ ಸಹಜವಾಗಿಯೇ ಅಡ್ಡಿ ಬಂದಿತು.
ಕೋಪೋದ್ರಿಕ್ತ ಶಿಕ್ಷಕನ ಎದುರು ಬಾಲಕ ತಾನು ಹಾಗೆ ಹೇಳಿದ್ದು ನಿಜ ಹಾಗೂ ಅದು ತನ್ನ ಪ್ರಾಮಾಣಿಕ ಅಭಿಪ್ರಾಯ-ವೆಂದು ದಿಟ್ಟವಾಗಿ ಉತ್ತರಿಸಿದ್ದಾನೆ. ಇದರಿಂದ ಇನ್ನಷ್ಟು ಕೆರಳಿದ ಶಿಕ್ಷಕ ಅನಿಕೇತನನನ್ನು ತರಗತಿಯಲ್ಲಿ ಎಲ್ಲ ಸಹಪಾಠಿಗಳ ಎದುರಿಗೆ ಮನಬಂದಂತೆ ನಿಂದಿಸಿದ್ದಲ್ಲದೇ ಅಸಹಾಯಕ ಬಾಲಕನ ಕಪಾಳಕ್ಕೆ ಪಟಪಟನೇ ಬಾರಿಸಿದ. ಅಷ್ಟೇ ಅಲ್ಲ, ಕೂಡಲೇ ಹುಡುಗನನ್ನು ತರಗತಿಯಿಂದ ಹೊರಗೆ ಕಳುಹಿಸಿದ.
ಹೀಗೆ ಸತ್ಯ ನುಡಿದದ್ದೇ ಮಹಾಪರಾಧವಾಗಿ ಶಿಕ್ಷಕನಿಂದ ಹೊಡೆಸಿಕೊಂಡು ಗಾಸಿಗೊಂಡ ಅನಿಕೇತನ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಮರಳಿದ. ಈಗ ಕಸಿವಿಸಿಗೊಳ್ಳುವ ಸರದಿ ಪೋಷಕರದು. ತಮ್ಮ ಮಗ ಬೇರೇನಾದರೂ ತಪ್ಪೆಸಗಿ ಶಿಕ್ಷಕರ ಮೇಲೆ ದೂರುತ್ತಿರಬಹುದೇ ಎಂಬ ಅನುಮಾನದಿಂದ ಅವನನ್ನು ವಿಶ್ವಾಸದಿಂದ ಮಾತನಾಡಿಸಿ ಇಡೀ ಪ್ರಕರಣದ ಸಂಪೂರ್ಣ ವಿವರಗಳನ್ನು ಕೆದಕಿದರು. ಕೊನೆಗೆ ತಮ್ಮ ಮಗ ತಪ್ಪು ಮಾಡಿಲ್ಲವೆಂಬುದು ಖಾತ್ರಿಯಾಯಿತಷ್ಟೇ ಅಲ್ಲ, ಅವನು ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಸತ್ಯ ನುಡಿಯುವ ದಿಟ್ಟತನ ತೋರಿದ್ದು ಹೆಮ್ಮೆ ಮೂಡಿಸಿತು.
ಶಿಕ್ಷಕರ ವರ್ತನೆಯಿಂದ ಬೇಸರಗೊಂಡ ಪೋಷಕರು ಕೂಡಲೇ ಆ ಶಿಕ್ಷಕರನ್ನು ಭೇಟಿಯಾಗಲು ಯತ್ನಿಸಿದರೆ ಅವರ ಸಹಾಯಕರಿಂದ ಅಡ್ಡಿ, ಒರಟು ವರ್ತನೆ, ಅಸಭ್ಯ ಭಾಷಾ ಪ್ರಯೋಗ. ಕೊನೆಗೂ ಭೇಟಿಯಾದ ಶಿಕ್ಷಕರು ತಮ್ಮದೇನೂ ತಪ್ಪಿಲ್ಲವೆಂದೇ ವಾದಿಸಿದರು.
ಮಕ್ಕಳನ್ನು ದೈಹಿಕವಾಗಿ ಶಿಕ್ಷಿಸುವ ಹಕ್ಕು ತಮಗಿದೆ ಎಂಬ ಧೋರಣೆ ಅವರದು. ಶಿಕ್ಷಕರಿಗೆ ಸುತ್ತುವರಿದ ಅವರ ಸಹಾಯಕರು ಹಾಗೂ ಬೆಂಬಲಿಗರ ಪಡೆಯ ಸಾಥ್. ಮಾತಿನ ಮಧ್ಯೆ ಪೊಲೀಸರಿಗೆ ದೂರು ನೀಡುವ ಪ್ರಸ್ತಾಪ ಬಂದಾಗ ಆ ಶಿಕ್ಷಕರು ನಾನು ಒಬ್ಬ ಡಿಸಿಪಿ (ಪೊಲೀಸ್ ಅಧಿಕಾರಿ) ಮಗ ಎಂದು ಅಬ್ಬರಿಸಿದರು. ಹೀಗೆಂದು ಹೇಳಿಕೊಂಡು ಹೆದರಿಸುವುದು ಅವರ ಚಾಳಿಯಂತೆ. ವಿಚಿತ್ರವೆಂದರೆ ಅಲ್ಲಿ ನೆರೆದ ಬಹುಪಾಲು ಪೋಷಕರು ಶಿಕ್ಷಕರ ಕ್ರಮವನ್ನು ಖಂಡಿಸಿದರೂ, ಶಿಕ್ಷಕರು ಹೊಡೆದರೆ ತಪ್ಪೇನು ಎಂಬ ನಿಲುವಿನ ಕೆಲವರೂ ಅಲ್ಲಿದ್ದರು. ಈ ಮುಂಗೋಪಿ ಶಿಕ್ಷಕ ತರಗತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪುಸ್ತಕ, ಪೆನ್ನು ಎಸೆಯುವುದು, ಕಪಾಳಕ್ಕೂ ಬಿಗಿಯುವುದು, ಉತ್ತರ ಪತ್ರಿಕೆಗಳನ್ನು ಹರಿದು ವಿದ್ಯಾರ್ಥಿಗಳ ಮೇಲೆ ಎಸೆಯುವುದು ದಿನಂಪ್ರತಿ ನಡೆಯುವುದಂತೆ.
ಮಕ್ಕಳ ಮನಸ್ಸನ್ನು, ಗೌರವವನ್ನು ಪ್ರೀತಿಯಿಂದ ಗೆಲ್ಲಬೇಕಾದ ಶಿಕ್ಷಕರು ಅದನ್ನು ಭಯ ಹುಟ್ಟಿಸುವ ಮೂಲಕ ಸಾಧಿಸಹೊರಟಿರುವುದು ದುರಂತ. ಒಬ್ಬ ವ್ಯಕ್ತಿಯಾಗಿ ಇವರ ಧೋರಣೆ, ವರ್ತನೆ ಅಷ್ಟೇನೂ ಅಪಾಯಕಾರಿಯಲ್ಲ. ಅದು ಅವರ ಅನಾರೋಗ್ಯಕರ ಧೋರಣೆ ಸಮಸ್ಯೆ ಎಂದು ನಿರ್ಲಕ್ಷಿಸಬಹುದು. ಆದರೆ ಒಬ್ಬ ಶಿಕ್ಷಕರಾಗಿ ಇವರ ವರ್ತನೆ ಅಪಾಯಕಾರಿ ಹಾಗೂ ಆಕ್ಷೇಪಾರ್ಹ.
ಈ ಘಟನೆ ನಡೆದದ್ದು ಮೊನ್ನೆ ಆಚರಿಸಿದ ಮಕ್ಕಳ ದಿನದಂದು! ಅದೂ ಆದರ್ಶ ಗುರುಪರಂಪರೆಯ ಇತಿಹಾಸವನ್ನು ಹೊಂದಿದ ಮೈಸೂರಿನಲ್ಲಿ!
ಮೇಲಿನ ಘಟನೆಯು ಮೇಲ್ನೋಟಕ್ಕೆ ಉಪೇಕ್ಷಣೀಯ ಬಿಡಿ ಘಟನೆ ಎನ್ನಿಸುತ್ತದೆ. ಆದರೆ ಮಕ್ಕಳ ಸೂಕ್ಷ್ಮ ಮನಸ್ಸನ್ನು ತಲ್ಲಣಗೊಳಿಸುವ ಇಂತಹ ಸಂದರ್ಭಗಳ ಆಳಕ್ಕೆ ಇಣುಕಿದರೆ ಅಪಾಯದ ವಿಸ್ತಾರ ಮನವರಿಕೆಯಾಗುತ್ತದೆ. ಇತ್ತೀಚೆಗೆ ಪೋಷಕರು, ಶಿಕ್ಷಕರು ಮಕ್ಕಳನ್ನು ಅಂಕ ಗಳಿಸುವ ಯಂತ್ರ ಎಂದೇ ಭಾವಿಸುತ್ತಿದ್ದಾರೆ. ಮೂಷಿಕ ಓಟದಲ್ಲಿ ತಮ್ಮ ಮಕ್ಕಳು ಮೊದಲಿಗರಾಗಬೇಕೆಂಬ ಭ್ರಮೆಯಲ್ಲಿ ಪೋಷಕರು ಸಿಲುಕಿದ್ದಾರೆ. ಒಟ್ಟಾರೆ ಮಕ್ಕಳು ಹೆಚ್ಚು ಹೆಚ್ಚು ಅಂಕ ಗಳಿಸಬೇಕು. ಅದಕ್ಕಾಗಿ ಪೋಷಕರು ಯಾವುದೇ ಬೆಲೆ ತೆರಲಾದರೂ ಸಿದ್ಧ. ಶಾಲೆ, ಮನೆ, ಟ್ಯೂಷನ್ ಹೀಗೆ ಎಲ್ಲೆಡೆ ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ. ಈ ಹಿನ್ನೆಲೆಯಲ್ಲಿಯೇ ಶಿಕ್ಷಕರಿಂದ ಮಕ್ಕಳ ಮೇಲಾಗುವ ದೈಹಿಕ, ಮಾನಸಿಕ ಹಿಂಸೆಗೆ ಪೋಷಕರೂ ಪರೋಕ್ಷವಾಗಿ ಕಾರಣರಾಗುತ್ತಾರೆ. ಪರಿಣಾಮವಾಗಿ ಮಕ್ಕಳ ವಯೋಮಾನ ಸಹಜ ವರ್ತನೆಗಳು, ಸೂಕ್ಷ್ಮ ಸಂವೇದನೆಗಳು ಬಲಿಯಾಗುತ್ತಿವೆ.
ಅಂಕ ಗಳಿಕೆಯೇ ಅಂತಿಮ ಎಂದು ಭಾವಿಸುವವರ ಎದುರಿಗೆ ಮಕ್ಕಳ ಹಕ್ಕುಗಳ ರಕ್ಷಣೆ, ಅವರ ಆಸಕ್ತಿ-ಅಭಿರುಚಿಗಳ ಪೋಷಣೆ, ಸರ್ವಾಂಗೀಣ ಬೆಳವಣಿಗೆ ಮುಂತಾದುವೆಲ್ಲಾ ಗೌಣ. ಮಕ್ಕಳಲ್ಲಿ ಆದರ್ಶ, ನೈತಿಕತೆ, ಜೀವನ ಮೌಲ್ಯಗಳನ್ನು ತುಂಬುವ ಕರ್ತವ್ಯಕ್ಕೆ ಎಲ್ಲರೂ ವಿಮುಖ. ವಿಪರ್ಯಾಸವೆಂದರೆ ಮಕ್ಕಳ ಮೇಲಿನ ಇಂತಹ ಅಂತರ್ಗತ ಅನ್ಯಾಯ, ದೌರ್ಜನ್ಯಗಳನ್ನು ಮಕ್ಕಳ ಉಜ್ವಲ ಭವಿಷ್ಯದ ಹೆಸರಿನಲ್ಲೇ ಎಸಗಲಾಗುತ್ತದೆ! ಈ ಬಗ್ಗೆ ವಿಚಾರವಂತ ಪೋಷಕರು, ಜವಾಬ್ದಾರಿಯುತ ಶಿಕ್ಷಕರು, ಸಮಾಜ ಗಂಭೀರವಾಗಿ ಆಲೋಚಿಸಬೇಕಲ್ಲವೇ?
ಅಂದಹಾಗೆ ಅನಿಕೇತನ ನನ್ನ ಮಗ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.