ADVERTISEMENT

ಗುರುವಾರ, 20–7–1967

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

* ಬೆಲೆ ಏರಿಕೆ ನಿಯಂತ್ರಣದ ಹೊರತು ವೇತನಕ್ಕೆ ತಡೆ ಇಲ್ಲ
ನವದೆಹಲಿ, ಜುಲೈ 19–
ಬೆಲೆ ಏರಿಕೆ ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದ ಹೊರತು ಕಾರ್ಮಿಕರ ವೇತನವನ್ನು ತಡೆಹಿಡಿಯುವುದಿಲ್ಲ ಎಂದು ಕಾರ್ಮಿಕ ಖಾತೆ ರಾಜ್ಯ ಸಚಿವ ಶ್ರೀ ಎಲ್‌.ಎನ್‌. ಮಿಶ್ರಾ ಲೋಕಸಭೆಯಲ್ಲಿ ಇಂದು ಸ್ಪಷ್ಟಪಡಿಸಿದರು.

ಬೆಲೆ ಏರಿಕೆಯನ್ನು ನಿಯಂತ್ರಿಸಲು ಆಡಳಿತ ಯಂತ್ರಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ಸರ್ಕಾರ ಮೊದಲು ಬ್ಯಾಂಕ್‌ಗಳನ್ನು  ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಿದೆ ಎಂದರು.

* ಮಧ್ಯಪ್ರದೇಶ: 36 ಶಾಸಕರಿಂದ ಪಕ್ಷತ್ಯಾಗ
ಭೋಪಾಲ್‌, ಜುಲೈ 19–
ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ 36 ಮಂದಿ ಶಾಸಕರು ಇಂದು ಕಾಂಗ್ರೆಸ್‌ ತ್ಯಜಿಸಿ, ವಿರೋಧ ಪಕ್ಷವನ್ನು ಸೇರಿದ್ದಾರೆ.
ನಾಳೆ ಅಧಿವೇಶನದಲ್ಲಿ ವಿರೋಧಪಕ್ಷ, ಬಹುಮತ ಸಾಬೀತುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಸಾಧ್ಯತೆ ಇದೆ.

ADVERTISEMENT

* ಬಂದ್‌ಗೆ ನೀರಸ ಪ್ರತಿಕ್ರಿಯೆ
ಬೆಂಗಳೂರು, ಜುಲೈ 19–
ಶಾಸಕ ಶ್ರೀ ವಾಟಾಳ್‌ ನಾಗರಾಜ್‌ ಅವರು ನೀಡಿದ್ದ ಬೆಂಗಳೂರು ಬಂದ್‌ ಕರೆಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಜೆ ಕೆಲವೇ ಕೆಲವು ಪ್ರತಿಭಟನಾಕಾರರು ಮೆರವಣಿಗೆ ನಡೆಸಿದ್ದನ್ನು ಬಿಟ್ಟರೆ, ನಗರದಲ್ಲಿ ಬುಧವಾರ ಜನಜೀವನ ಸಾಮಾನ್ಯವಾಗಿತ್ತು.

* ಪಕ್ಷದ ಮುಖಂಡರಿಗೆ ಪ್ರಧಾನಿ ಸವಾಲು
ನವದೆಹಲಿ, ಜುಲೈ 19–
ಸರ್ಕಾರದ ವಿದೇಶಾಂಗ ನೀತಿ, ವಿಶೇಷವಾಗಿ ಟಿಬೆಟ್‌ ಹಾಗೂ ಪಶ್ಚಿಮ ಏಷ್ಯಾ ನೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರ ವಿರುದ್ಧ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸರ್ಕಾರದ ಪಶ್ಚಿಮ ಏಷ್ಯಾ ನೀತಿ ಸರಿಯಾಗಿದೆ ಮತ್ತು ಇದಕ್ಕಿಂತ ಉತ್ತಮ ಆಯ್ಕೆಯೇ ಇಲ್ಲ. ಯಾವುದೇ ಸದಸ್ಯರಿಗೆ ಈ ಬಗ್ಗೆ ಅಸಮಾಧಾನ ಇದ್ದರೆ ಅಂಥವರು ನಾಯಕತ್ವ ಬದಲಾವಣೆಗೆ ಪ್ರಸ್ತಾವ ಸಲ್ಲಿಸಬಹುದು’ ಎಂದು ಅವರು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.