ರಾಂಚಿಯಲ್ಲಿ ಪುಂಡರಿಗೆ ಕಂಡಲ್ಲಿ ಗುಂಡು
ರಾಂಚಿ, ಆ. 30– ರಾಂಚಿ ನಗರದಲ್ಲಿ ಯಾರೇ ಆದರೂ ದೊಂಬಿ ಕೃತ್ಯ ನಡೆಸುವುದು ಕಂಡುಬಂದರೆ ಅವರ ಮೇಲೆ ಗುಂಡಿಕ್ಕುವಂತೆ ಸೇನೆ ಹಾಗೂ ಪೋಲಿಸರಿಗೆ ಬಿಹಾರ ಸರ್ಕಾರವು ಆಜ್ಞೆ ಮಾಡಿದೆ.
ಗೂಂಡಾಗಳ ಚಟುವಟಿಕೆ ಹೆಚ್ಚಿರುವ ಕಡೆಗಳಲ್ಲಿ ಇರಿತದ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮಹಾಜನ್ ಆಯೋಗದ ವರದಿ ಚವಾಣರ ಕಚೇರಿ ಪರಿಶೀಲನೆಯಲ್ಲಿ
ನವದೆಹಲಿ, ಆ. 30– ಮೈಸೂರು– ಮಹಾರಾಷ್ಟ್ರ– ಕೇರಳ ಗಡಿ ವಿವಾದವನ್ನು ಕುರಿತ ಮಹಾಜನ್ ಆಯೋಗದ ವರದಿಯನ್ನು ಪರಿಶೀಲನೆಗೆ ಸಿದ್ಧಪಡಿಸುವುದಕ್ಕಾಗಿ ತಮ್ಮ ಕಚೇರಿಗೆ ಕಳಿಸಿರುವುದಾಗಿ ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ಹೇಳಿದರು.
ವರದಿಯಲ್ಲೇನಿದೆ ಎಂಬ ಪ್ರಶ್ನೆಗೆ ‘ನಾನು ವರದಿಯನ್ನು ನೋಡಿಯೇ ಇಲ್ಲ’ ಎಂದರು ಚವಾಣ್.
ವರದಿಯ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಸ್ವಲ್ಪ ಕಾಲ ಬೇಕಾಗುವುದೆಂದೂ, ಇಂಥ ವರದಿಗಳನ್ನು ಸರ್ಕಾರದ ನಿರ್ಧಾರದ ಜೊತೆಯಲ್ಲೇ ಪ್ರಕಟಿಸಬೇಕೆಂದೂ ಅವರು ಹೇಳಿದರು.
ಆಯೋಗದ ಶಿಫಾರಸುಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ಊಹಾಪೋಹಗಳೆಂದು ಚವಾಣ್ ನುಡಿದರು.
ಪಾನನಿರೋಧ ರದ್ದು 1 ತಿಂಗಳು ಮುಂದಕ್ಕೆ
ಬೆಂಗಳೂರು, ಆ. 31– ಬಿದರೆ ಇಡೀ ಜಿಲ್ಲೆ ಮತ್ತು ಇತರ ಆರು ತಾಲ್ಲೂಕುಗಳನ್ನು ಬಿಟ್ಟು ಉಳಿದ ಎಲ್ಲ ಪ್ರದೇಶಗಳಲ್ಲೂ ಪಾನ ನಿರೋಧವನ್ನು ರದ್ದು ಮಾಡಲಾಗಿರುವ ಆಜ್ಞೆ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.