ADVERTISEMENT

ಬುಧವಾರ, 11–1–1967

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST

ತಷ್ಕೆಂಟ್‌ ಘೋಷಣೆ ವಾರ್ಷಿಕೋತ್ಸವ
ನವದೆಹಲಿ, ಜ. 10– 
ಪರಸ್ಪರ ಭಿನ್ನಾಭಿಪ್ರಾಯಗಳನ್ನು ಸ್ನೇಹ ಮತ್ತು ವಿಶ್ವಾಸದ ವಾತಾವರಣದಲ್ಲಿ ಶಾಂತಿಯುತವಾಗಿ ಬಗೆಹರಿಸಲು ಸಹಕರಿಸುವಂತೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಲ್ಲಿ ಇಂದು ಪಾಕಿಸ್ತಾನಕ್ಕೆ ಕರೆ ನೀಡಿದರು.

‘ಸ್ನೇಹದಿಂದ ಬಾಳಿದರೆ ಮಾತ್ರ ಇಬ್ಬರೂ ಮುಂದುವರೆಯಲು ಸಾಧ್ಯ’ ಎಂದು ತಷ್ಕೆಂಟ್‌ ಘೋಷಣೆಗೆ ಸಹಿ ಹಾಕಿದ ಪ್ರಥಮ ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಅವರು ಹೇಳಿದರು.

ಚೀನಿ ಅಧ್ಯಕ್ಷರ ಪತ್ನಿಯ ತಾತ್ಕಾಲಿಕ ಅಪಹಾರ
ಟೋಕಿಯೋ, ಜ. 10–
ಚೀನದ ಅಧ್ಯಕ್ಷ ಲಿಯು ಷಾವ್‌– ಚಿಯವರ ಪತ್ನಿ ವಾಂಗ್‌ ಕುವಾಂಗ್‌–ಮೀ ಅವರನ್ನು ರೆಡ್‌ ಗಾರ್ಡ್‌ಗಳು ಕಳೆದ ಶುಕ್ರವಾರ ಅಪಹರಿಸಿಕೊಂಡು ಹೋಗಿದ್ದರೆಂದು ಪೀಕಿಂಗ್‌ನಲ್ಲಿರುವ ಜಪಾನಿನ ವರದಿಗಾರರು ತಿಳಿಸಿದ್ದಾರೆ.

ತಮ್ಮ ಪುತ್ರಿಯು ಅಪಘಾತವೊಂದರಲ್ಲಿ ಗಾಯಗೊಂಡಿರುವರೆಂಬ ಕಟ್ಟುಕತೆಯನ್ನು ಆಕೆಗೆ ತಿಳಿಸಿ, ಆಕೆಯನ್ನು ಆಸ್ಪತ್ರೆಯೊಂದಕ್ಕೆ ಮೋಸದಿಂದ ಕರೆದೊಯ್ಯಲಾಯಿತೆಂದೂ, ಆಕೆಯೊಡನಿದ್ದ ಬೆಂಗಾವಲಿನವರಿಂದ ಆಕೆಯನ್ನು ಪ್ರತ್ಯೇಕಿಸಿ ಚಿಂಗ್‌ ಹುವಾ ವಿಶ್ವವಿದ್ಯಾನಿಲಯಕ್ಕೆ ಎಳೆದುಕೊಂಡು ಹೋಗಿ ಮಾರನೆಯ ಬೆಳಿಗ್ಗೆ 5 ಗಂಟೆಯವರೆಗೆ ಅಲ್ಲಿ ಉಳಿಸಿಕೊಳ್ಳಲಾಯಿತೆಂದೂ ಈ ವರದಿಗಳು ತಿಳಿಸಿವೆ.

ಕೃಷ್ಣ ಮೆನನ್‌ರಿಗೆ ಸೋಲು ಖಚಿತ ಎಂದು ಶ್ರೀ ಪಾಟೀಲ್‌
ಮುಂಬೈ, ಜ. 10–
ಮಾಜಿ ರಕ್ಷಣಾ ಸಚಿವ ಶ್ರೀ ವಿ.ಕೆ. ಕೃಷ್ಣಮೆನನ್‌ರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುವುದು ಖಂಡಿತವೆಂದು ಕೇಂದ್ರ ರೈಲ್ವೆ ಸಚಿವ ಶ್ರೀ ಎಸ್‌.ಕೆ. ಪಾಟೀಲರು ಇಂದು  ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.