ADVERTISEMENT

ಬುಧವಾರ, 17–5–1967

​ಪ್ರಜಾವಾಣಿ ವಾರ್ತೆ
Published 16 ಮೇ 2017, 19:30 IST
Last Updated 16 ಮೇ 2017, 19:30 IST

ಇಡೀ ಕಾಸರಗೋಡಿನ ವಿಲೀನಕ್ಕೆ ಒತ್ತಾಯ
ಮಂಗಳೂರು, ಮೇ 16– 
ಎಂಟು ಮಲಯಾಳಿ ಮಾತನಾಡುವ ಗ್ರಾಮಗಳನ್ನು ಬಿಟ್ಟು ಇಡೀ ಕಾಸರಗೋಡು ತಾಲ್ಲೂಕನ್ನು ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸಬೇಕೆಂದು ರಾಜ್ಯ ಸರ್ಕಾರವು ಮಹಾಜನ್‌ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ಹೇಳಿದೆ.

ಇತ್ತೀಚೆಗೆ ದೆಹಲಿಯಲ್ಲಿ ಸಲ್ಲಿಸಲಾದ 32 ಪುಟಗಳ ಈ ಮನವಿಯಲ್ಲಿ ರಾಜ್ಯ ಪುನರ್ರಚನಾ ಆಯೋಗವು ಕಾಸರಗೋಡು ಪ್ರಶ್ನೆಯ ಬಗ್ಗೆ ಕೈಕೊಂಡ ನಿರ್ಣಯದಿಂದ ಮೈಸೂರು ರಾಜ್ಯಕ್ಕಾದ ಅನ್ಯಾಯವನ್ನು ದೂರಗೊಳಿಸಲು ಆಯೋಗವು ತಾಲ್ಲೂಕಿನ ವರ್ಗಾವಣೆಗೆ ಸಲಹೆ ನೀಡಬೇಕೆಂದೂ ಮನವಿ ತಿಳಿಸಿದೆ.

ರಾಜ್ಯ ಪುನರ್ರಚನಾ ಆಯೋಗವು ಜಿಲ್ಲೆಯನ್ನು ಘಟಕವಾಗಿ ಪರಿಗಣಿಸಲು ಮೊದಲು ನಿರ್ಧರಿಸಿತ್ತು. ಆದರೆ ಕಾಸರಗೋಡಿನ ಪ್ರಶ್ನೆಯ ಬಗ್ಗೆ ಮಾತೃಭಾಷೆಯ ಪ್ರಶ್ನೆಯನ್ನು ಅನವಶ್ಯಕವಾಗಿ ಎತ್ತಿಹಿಡಿದು ತಾಲ್ಲೂಕನ್ನು ವರ್ಗಾಯಿಸುವ ನಿರ್ಣಯ ಕೈಕೊಂಡಿತ್ತು ಎಂದು ಮನವಿ ಹೇಳಿದೆಯಲ್ಲದೆ ಕಾಸರಗೋಡಿನ ಬಗ್ಗೆ ಆಯೋಗದ ನಿಲುವು ದೋಷಯುಕ್ತವಾಗಿತ್ತೆಂದು ವಾದಿಸಿದೆ.

ಭಾರತದ ಜನಸಂಖ್ಯೆ 50 ಕೋಟಿ
ಜಿನೀವ, ಮೇ 16–
ಭಾರತದ ಜನಸಂಖ್ಯೆ 50 ಕೋಟಿ ಮೀರಿತು ಎಂದು ಭಾರತದ ಆರೋಗ್ಯ ಸಚಿವ ಡಾ. ಎಸ್‌. ಚಂದ್ರಶೇಖರ್‌ ಅವರು ಇಂದು ವಿಶ್ವ ಆರೋಗ್ಯ ಅಧಿವೇಶನದಲ್ಲಿ ತಿಳಿಸಿದರು.

ವರ್ಷಕ್ಕೆ ಜನನ ಸಂಖ್ಯೆ ಶೇಕಡಾ 2.5 ರಷ್ಟು ಏರುವುದೆಂದು ಅಂದಾಜು ಮಾಡಲಾಗಿದ್ದು, 1966 ರಿಂದ 70ರ ವರೆಗಿನ ಅವಧಿಯಲ್ಲಿ ವರ್ಷಕ್ಕೆ ಒಂದು ಕೋಟಿ ಇಪ್ಪತ್ತೈದು ಲಕ್ಷ ಜನಸಂಖ್ಯೆ ಹೆಚ್ಚುವುದೆಂದು ಅವರು ತಿಳಿಸಿದರು.

‘ಜನಸಂಖ್ಯೆ ಏರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟದಿದ್ದರೆ ಭಾರತದ ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗಲಾರವು’ ಎಂದು
ಡಾ. ಚಂದ್ರಶೇಖರ್‌ ತಿಳಿಸಿದರು.

ದೆಹಲಿ ನಿರ್ಮಲೀಕರಣ: ಶ್ರೀ ಗಿರಿ ಯೋಚನೆ
ಬೆಂಗಳೂರು, ಮೇ 16–
ಉಪರಾಷ್ಟ್ರಪತಿ ಶ್ರೀ ವಿ.ವಿ. ಗಿರಿಯವರು ಬೆಂಗಳೂರಿನಲ್ಲಿ ಮಾಡಿದಂತೆ, ದೆಹಲಿಯಲ್ಲಿಯೂ ನಗರ ನಿರ್ಮಲೀಕರಣ ಕಾರ್ಯವನ್ನು ಆರಂಭಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT