ADVERTISEMENT

ಬುಧವಾರ, 22–11–1967

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಬುಧವಾರ, 22–11–1967
ಬುಧವಾರ, 22–11–1967   

ಅಜಯ್ ಸಂಪುಟ ವಜಾ

ಕಲ್ಕತ್ತ, ನ. 21– ಪಶ್ಚಿಮ ಬಂಗಾಳದ ಸಂಯುಕ್ತ ರಂಗ ಸಚಿವ ಸಂಪುಟವನ್ನು ಇಂದು ರಾತ್ರಿ ವಜಾ ಮಾಡಲಾಯಿತು.

ಡಾ. ಪಿ.ಸಿ. ಘೋಷರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ADVERTISEMENT

ಅಭದ್ರ ಪರಿಸ್ಥಿತಿ ಅಂತ್ಯಕ್ಕೆ ಏಕೈಕ ಕ್ರಮವೆಂದು ಧರ್ಮವೀರ

ಕಲ್ಕತ್ತ, ನ. 21–ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ತಲೆದೋರಿರುವ ಕಷ್ಟಕರ ಪರಿಸ್ಥಿತಿಯಲ್ಲಿ ಅನಿಶ್ಚಯ ಹಾಗೂ ಅಭದ್ರತೆಯ ಅವಧಿಯನ್ನು ಕೊನೆಗಾಣಿಸುವುದು ಅತ್ಯಗತ್ಯವಾಗಿದೆ ಎಂದು ಪಶ್ಚಿಮ ಬಂಗಾಳದ
ರಾಜ್ಯಪಾಲ ಶ್ರೀ ಧರ್ಮವೀರರವರು ಸಂಯುಕ್ತ ರಂಗದ ಸಚಿವ ಸಂಪುಟವನ್ನು ವಜಾ ಮಾಡಿ ಇಂದು ರಾತ್ರಿ ಹೊರಡಿಸಿರುವ ಘೋಷಣೆಯಲ್ಲಿ ತಿಳಿಸಿದ್ದಾರೆ.

ವಿಧಾನ ಸಭೆಯಲ್ಲಿ ಬಹುಪಾಲು ಸದಸ್ಯರುಗಳ ವಿಶ್ವಾಸ ಕಳೆದುಕೊಂಡಿರುವ ಸಚಿವ ಸಂಪುಟ ಅಧಿಕಾರದಲ್ಲಿ ಮುಂದುವರೆಯುವುದು ಸಂವಿಧಾನದ ದೃಷ್ಟಿಯಿಂದ ಸರಿಯಾದುದಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.

ನ್ಯಾಯವೇತ್ತರಿಗೆ ದಿಗ್ಭ್ರಮೆ ತಂದ ಕ್ರಮ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ನ. 21– ರಾಷ್ಟ್ರಾಧ್ಯಕ್ಷರಿಂದ ಹರಿಯಾಣಾ ಸರ್ಕಾರವೂ, ರಾಜ್ಯಪಾಲರಿಂದ ಪಶ್ಚಿಮ ಬಂಗಾಳ ಸಚಿವ ಮಂಡಲಿಯೂ ವಜಾ ಮಾಡಲ್ಪಟ್ಟಿರುವ ಕ್ರಮವು ವಿರೋಧ ಪಕ್ಷಗಳಿಗೆ ದಿಗ್‌ಭ್ರಮೆ ಹಾಗೂ ಅತೀವ ಕೋಪವನ್ನುಂಟು ಮಾಡಿದೆ.

ಮುಖ್ಯವಾಗಿ ಕಲ್ಕತ್ತದ ಘಟನೆಗಳು ಹೆಚ್ಚು ಕ್ರೋಧ, ಜಿಗುಪ್ಸೆಗಳ
ನ್ನುಂಟು ಮಾಡಿವೆ, ಹರಿಯಾಣಾದಲ್ಲಿ ರಾಷ್ಟ್ರಪತಿಯ ಕ್ರಮವು ಲೋಕಸಭೆ ಒಪ್ಪಿಗೆ ಗಳಿಸಬೇಕು, ಆದರೆ ರಾಜ್ಯ‍ಪಾಲರ ವಿವೇಚನೆಯ ಶಿಶುವಾಗಿರುವ ಈ ಕ್ರಮವು ನ್ಯಾಯಾಧೀಶರ ಕೋರ್ಟು ಅಥವಾ ಚುನಾಯಿತ ಸಭೆಗಳ ವ್ಯಾಪ್ತಿಗೆ ಒಳಪಟ್ಟಿಲ್ಲ.

ಅನುಕೂಲವಾದಾಗ ಮಾತ್ರ ರಾಜ್ಯಾಂಗಕ್ಕೆ ಕಾಂಗ್ರೆಸ್ ಗೌರವ

ನವದೆಹಲಿ, ನ. 21– ತನ್ನ ಉದ್ದೇಶಗಳಿಗೆ ಅನುಕೂಲವಾಗಿರುವ ಸಂದರ್ಭಗಳನ್ನು ಬಿಟ್ಟರೆ ಮಿಕ್ಕಂತೆ ಕೇಂದ್ರದಲ್ಲಿರುವ ಕಾಂಗ್ರೆಸ್ ಸಚಿವ ಸಂಪುಟ ರಾಜ್ಯಾಂಗಕ್ಕೆ ಸ್ವಲ್ಪವೂ ಗೌರವ ತೋರಿಸುವುದಿಲ್ಲ ಎಂಬುದನ್ನು ಹರಿಯಾಣಾ ಮತ್ತು ಪಶ್ಚಿಮ ಬಂಗಾಳಾಗಳಲ್ಲಿ ಅದು ಇಂದು ತೆಗೆದುಕೊಂಡಿರುವ ಕಾರ್ಯಾಚರಣೆ ಸ್ಪಷ್ಟಪಡಿಸಿದೆ ಎಂದು ಲೋಕಸಭೆಯ ಕಮ್ಯುನಿಸ್ಟ್ (ಮಾರ್ಕ್ಸಿಸ್ಟ್) ಪಕ್ಷದ ಸದಸ್ಯರ ಉಪನಾಯಕ  ಶ್ರೀ ಪಿ. ರಾಮಮೂರ್ತಿ ಅವರು ಪಶ್ಚಿಮ ಬಂಗಾಳದ ಸಂಯುಕ್ತ ರಂಗ ಸರ್ಕಾರದ ವಜಾ ಕುರಿತು ಟೀಕಿಸಿದ್ದಾರೆ.

ಕೇಂದ್ರದ ಈ ‘ಆಡಿದ್ದೇ ಆಟ’ ನಡೆಯಲು ಪಶ್ಚಿಮ ಬಂಗಾಳದ ಜನತೆ ಬಿಡುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.