ADVERTISEMENT

ಬುಧವಾರ, 22–2–1967

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:30 IST
Last Updated 21 ಫೆಬ್ರುವರಿ 2017, 19:30 IST

ಡಾ. ಆಳ್ವ ಸೋಲು; ಜತ್ತಿ, ಅರಸ್, ಚನ್ನಯ್ಯ, ಶಿವಪ್ಪ ಅವರ ಆಯ್ಕೆ
ಬೆಂಗಳೂರು, ಫೆ. 21–
ನಾಲ್ಕನೆಯ ಮಹಾ ಚುನಾವಣೆಗಳ ಪ್ರಥಮ ಫಲಿತಾಂಶಗಳು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಕಹಿಯಾಗಿ ಪರಿಣಮಿಸಿವೆ. ಆರೋಗ್ಯ ಸಚಿವ ಡಾ. ಕೆ. ನಾಗಪ್ಪ ಆಳ್ವರು ಸುರತ್ಕಲ್ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರ ಮತಗಳಿಂದ ಪಿ.ಎಸ್.ಪಿ. ಅಭ್ಯರ್ಥಿಯ ಕೈಲಿ ಪರಾಭವಗೊಂಡಿದ್ದಾರೆ.

ಜನತಾಪಕ್ಷದ ಅಧ್ಯಕ್ಷ ಶ್ರೀ ಎಸ್. ಚನ್ನಯ್ಯನವರು ಕೃಷ್ಣರಾಜ ಕ್ಷೇತ್ರದಿಂದಲೂ, ವಿಧಾನಸಭೆಯ ವಿರೋಧ ಪಕ್ಷದ ನಾಯಕ, ರಾಜ್ಯ ಪಿ.ಎಸ್.ಪಿ. ಅಧ್ಯಕ್ಷ ಶ್ರೀ ಎಸ್. ಶಿವಪ್ಪ ಅವರು ಶ್ರವಣಬೆಳಗೊಳ ಕ್ಷೇತ್ರದಿಂದ ಆಯ್ಕೆಗೊಂಡಿದ್ದಾರೆ. ಆಹಾರ ಸಚಿವ ಶ್ರೀ ಬಿ.ಡಿ. ಜತ್ತಿ ಅವರು ಜಮಖಂಡಿಯಿಂದ ಪುನರಾಯ್ಕೆ ಹೊಂದಿದ್ದಾರೆ. ಸಾರಿಗೆ ಸಚಿವರಾದ ಡಿ. ದೇವರಾಜ ಅರಸ್‌ ಅವರು ಹುಣಸೂರಿನಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಇ.ಎಂ.ಎಸ್.ಗೆ ಪ್ರಚಂಡ ಜಯ
ಪಟ್ಟಾಂಬಿ –
ಕೇರಳ ಕಮ್ಯುನಿಸ್ಟ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್. ನಂಬೂದಿರಿಪಾಡ್‌ರವರು ಪಟ್ಟಾಂಬಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ 12,000ಕ್ಕೂ ಹೆಚ್ಚು ಮತದಿಂದ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಕಾಂಗ್ರೆಸ್ಸಿಗೆ 2 ಸ್ಥಾನ ನಷ್ಟ
ಬೆಂಗಳೂರು, ಫೆ. 21–
ಇಂದು ನಗರದಲ್ಲಿ ಪ್ರಕಟಿಸಲಾದ ಮೂರು ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಕಳೆದುಕೊಂಡು ಒಂದು ಸ್ಥಾನವನ್ನು ಉಳಿಸಿಕೊಂಡಿದೆ.

ರಾಜಸ್ತಾನ್ ಮುಖ್ಯಮಂತ್ರಿ ಸುಖಾಡಿಯ ಜಯ
ಜೈಪುರ, ಫೆ. 21–
ರಾಜಸ್ತಾನ್ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮುಖ್ಯಮಂತ್ರಿ ಮೋಹನ್‌ಲಾಲ್ ಸುಖಾಡಿಯ ಅವರು ಉದಯಪುರ ಕ್ಷೇತ್ರದಿಂದ 3428 ಮಗತಳ ಬಹುಮತದಿಂದ ಪುನರಾಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.