ಸಂಪುಟ ರಚನೆ ಕುರಿತು ದೆಹಲಿಯಲ್ಲಿ ಕಾಮರಾಜ್ ಜತೆ ಎಸ್.ಎನ್. ಚರ್ಚೆ
ನವದೆಹಲಿ, ಮಾ. 7– ಬೆಂಗಳೂರಿನಿಂದ ಇಂದು ಸಂಜೆ ಇಲ್ಲಿಗೆ ಆಗಮಿಸಿದ ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ರವರನ್ನು ಭೇಟಿ ಮಾಡಿದರು.
ಮೈಸೂರಿನಲ್ಲಿ ಕಾಂಗ್ರೆಸ್ ಸಂಪುಟದ ರಚನೆ ಕುರಿತು ಇಬ್ಬರೂ 10 ನಿಮಿಷ ಮಾತುಕತೆ ನಡೆಸಿದರೆಂದು ಗೊತ್ತಾಗಿದೆ. ಸಂಪುಟದಲ್ಲಿ ತಾವು ಸೇರಿಸಬೇಕೆಂದಿರುವ ಸಚಿವರ ಹೆಸರುಗಳನ್ನು ಶ್ರೀ ನಿಜಲಿಂಗಪ್ಪನವರು ಕಾಮರಾಜರಿಗೆ ತಿಳಿಸಿದರೆಂದೂ ಹೇಳಲಾಗಿದೆ.
**
ಅಕ್ಕಿ ತವುಡುನಿಂದ ಎಣ್ಣೆ: ಮಂಡ್ಯದಲ್ಲಿ ಕಾರ್ಖಾನೆ
ಬೆಂಗಳೂರು, ಮಾ. 7– ಅಕ್ಕಿ ತವುಡುನಿಂದ ಎಣ್ಣೆ ತೆಗೆದು, ಹಿಂಡಿ ತಯಾರಿಸುವ ಕಾರ್ಖಾನೆಯೊಂದನ್ನು ಮಂಡ್ಯದಲ್ಲಿ ಸ್ಥಾಪಿಸಲಾಗುವುದು. ಕೇಂದ್ರ ಸರಕಾರದ ಈ ಯೋಜನೆಯನ್ನು ಸಹಕಾರಿ ಕ್ಷೇತ್ರದಲ್ಲಿ ಕಾರ್ಯಗತ ಮಾಡಲಾಗುವುದು.
ಹತ್ತು ಲಕ್ಷ ರೂ. ಬಂಡವಾಳದ ಕಾರ್ಖಾನೆಯನ್ನು ಮಂಡ್ಯದ ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸಂಘವು ನಿರ್ವಹಿಸುವುದು. ದಿನಕ್ಕೆ ಹತ್ತು ಟನ್ ಹಿಂಡಿ ತಯಾರಾಗುವುದು. ಮೈಸೂರು ರಾಜ್ಯದಲ್ಲಿ ಇಂತಹ ಕಾರ್ಖಾನೆ ಇದೇ ಮೊದಲು.
**
ಬಂಗಾಳ ಸಂಪುಟದ ಪ್ರಥಮ ಸಭೆ
ಕಲ್ಕತ್ತ, ಮಾ. 7– ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸೇತರ ಸಂಯುಕ್ತ ರಂಗದ ಪ್ರಥಮ ಸಚಿವ ಸಂಪುಟದ ಸಭೆಯು ನಿನ್ನೆ ವಿಧಾನ ಸಭಾಭವನದಲ್ಲಿ ಮುಖ್ಯಮಂತ್ರಿ ಶ್ರೀ ಅಜಯ ಕುಮಾರ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡು ರಾಜ್ಯದ ಆರ್ಥಿಕ ಮತ್ತು ಆಡಳಿತ ವಿಷಯಗಳನ್ನು ಚರ್ಚಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.