ADVERTISEMENT

ಭಾನುವಾರ, 28–5–1967

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ
ವಿಶ್ವಸಂಸ್ಥೆ, ಮೇ 27–  ಮಧ್ಯ ಪ್ರಾಚ್ಯದಲ್ಲಿ ಈಗ ಉಂಟಾಗಿರುವ ‘ಆಸ್ಫೋಟನ ಪರಿಸ್ಥಿತಿ’ ತಣ್ಣಗಾಗುವುದಕ್ಕೆ ‘ಕಾಲಾಕಾಶ’ ನೀಡಬೇಕು ಮತ್ತು ಈ ಬಿಕ್ಕಟ್ಟಿಗೆ ಕಾರಣಗಳನ್ನು ಕಂಡುಹಿಡಿದು ಪರಿಹಾರವನ್ನು ಹುಡುಕಲು ಭದ್ರತಾ ಸಮಿತಿಗೆ ಸಹಾಯ ಮಾಡಬೇಕು ಎಂದು ಇದಕ್ಕೆ ಸಂಬಂಧಪಟ್ಟ ಎಲ್ಲ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಥಾಂಟ್‌ ಅವರು ಮನವಿ ಮಾಡಿಕೊಂಡಿದ್ದಾರೆ.
 
ಅರಬ್‌ ಗಣರಾಜ್ಯದ ನಾಯಕರೊಡನೆ ತಾವು ನಡೆಸಿದ ಮಾತುಕತೆ ಹಾಗೂ ಈ ಬಿಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಅವರು ಭದ್ರತಾ ಸಮಿತಿಗೆ ಇಂದು ವರದಿ ಮಾಡಿದರು.
 
ಉಥಾಂಟ್‌ ಸಂಧಾನ ಯತ್ನ ವಿಫಲ (ಶಹಮಣಕರ್‌ ಅವರಿಂದ)
ಲಂಡನ್‌, ಮೇ 27– ಅರಬ್‌–ಇಸ್ರೇಲ್‌ ತಿಕ್ಕಾಟದ ಪರಿಸ್ಥಿತಿ ಶಾಂತವಾಗಿರುವಂತೆ ಕಂಡುಬರುತ್ತಿದ್ದರೂ ಈ ಶಾಂತಿ ಸ್ಥಿತಿ ಬಿರುಗಾಳಿಯ ಮುನ್ಸೂಚನೆಯಾಗಿದೆ ಎಂದು ಕೈರೊ ಹಾಗೂ ಟೆಲ್‌ ಅವಿವ್‌ಗಳಿಂದ ಬರುತ್ತಿರುವ ವರದಿಗಳು ಸೂಚಿಸುತ್ತಿವೆ.
 
ಇಸ್ರೇಲ್‌ ವಿನಾಶವೇ ಅರಬ್‌ ರಾಷ್ಟ್ರಗಳ ಗುರಿ ಎಂದು ಅಧ್ಯಕ್ಷ ನಾಸೆರ್‌
ಕೈರೋ, ಮೇ 27–  ‘ಇಸ್ರೇಲ್‌ನ ವಿನಾಶವೇ ನಮ್ಮ ಗುರಿ’ ಎಂಬುದಾಗಿ ಅಧ್ಯಕ್ಷ ನಾಸೆರರು ಇಂದು ಅರಬ್‌ ಕಾರ್ಮಿಕ ಸಂಘಗಳ ನಾಯಕರ ನಿಯೋಗವೊಂದಕ್ಕೆ ತಿಳಿಸಿದರು. ಹೋರಾಟ ಸಿರಿಯಾ ಅಥವಾ ಅರಬ್‌ ಗಣರಾಜ್ಯಗಳಿಗೆ ಮಾತ್ರ ಮಿತಿಗೊಳ್ಳುವುದಿಲ್ಲವೆಂದರು.
 
‘ಸಿರಿಯಾ ಅಥವಾ ಈಜಿಪ್ಟ್‌ ಮೇಲೆ ಇಸ್ರೇಲ್‌ ಆಕ್ರಮಣ ನಡೆಸಿದ್ದೇ ಆದರೆ ಇಸ್ರೇಲ್‌ ವಿರುದ್ಧ ನಾವು ಭಾರಿ ಪ್ರಮಾಣದಲ್ಲಿ ಹೋರಾಟ ನಡೆಸಬೇಕಾಗುತ್ತದೆ; ಎಂಬುದಾಗಿಯೂ ಅಧ್ಯಕ್ಷ ನಾಸೆರ್‌ ತಿಳಿಸಿದುದಾಗಿಯೂ ಕೈರೋ ರೇಡಿಯೋ ವರದಿ ಮಾಡಿದೆ.
 
ಸಂಘ–ಸಂಸ್ಥೆಗಳ ಎದುರು ಅಡ್ಡಿ ಆತಂಕಗಳ ವಿಮರ್ಶೆ (ವಿಶೇಷ ಪ್ರತಿನಿಧಿಯಿಂದ)
ರತ್ನತ್ರಯಮಂಟಪ, ಮೇ 27–  ಕನ್ನಡ ಸಾಹಿತ್ಯ ಸೇವೆಯಲ್ಲಿ ಪರಿಣಾಮಕಾರಿಯಾದ ಪಾತ್ರವಹಿಸಲು ಸಂಘ ಸಂಸ್ಥೆಗಳಿಗೆ ಇರುವ ಅಡ್ಡಿಗಳನ್ನು ಇಂದು ಇಲ್ಲಿ ನಡೆದ ಕನ್ನಡ ಸಂಘ ಸಂಸ್ಥೆಗಳ ಗೋಷ್ಠಿ ವಿಮರ್ಶಿಸಿತು.
 
ಬಲಗುಂದದ ಸಂಸ್ಥೆಗಳಿಗೆ ಪುನಶ್ಚೇತನ ಮೂಡಿಸಿ ನವದೃಷ್ಟಿಯನ್ನು ಬೆಳೆಸಲು ಪರಿಷತ್ತು ಮತ್ತು ಸರಕಾರ ಮಾಡಬೇಕಾದ ಕರ್ತವ್ಯಗಳನ್ನು ವಿವೇಚಿಸಲಾಯಿತು. ಭಾರತ ಸರಕಾರದ ಪ್ರಚಾರಶಾಖೆ ಅಧಿಕಾರಿ ಶ್ರೀ ಎನ್‌.ಎಸ್‌. ವೆಂಕೋಬರಾಯರು ಅಧ್ಯಕ್ಷತೆ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.