ದೇಶದ ತೀವ್ರ ಗಂಭೀರ ಆರ್ಥಿಕ ಪರಿಸ್ಥಿತಿ: ಮುರಾರಜಿ ನಿರೂಪಣೆ
ನವದೆಹಲಿ, ಮಾ. 20– ರಫ್ತುಗಳು ಇಳಿಮುಖವಾಗುತ್ತಿರುವ, ವೆಚ್ಚವು ಹೆಚ್ಚಾಗುತ್ತಿರುವ ಮತ್ತು ಆಂತರಿಕ ಕೊರತೆಗಳು ಏಕಪ್ರಕಾರವಾಗಿರುವ ಗಂಭೀರ ಸ್ವರೂಪದ ಆರ್ಥಿಕ ಚಿತ್ರಣವನ್ನು ಉಪ ಪ್ರಧಾನಮಂತ್ರಿ ಮತ್ತು ಅರ್ಥ ಸಚಿವ ಶ್ರೀ ಮುರಾರಜಿ ದೇಸಾಯಿಯವರು ಇಂದು ಲೋಕಸಭೆಯಲ್ಲಿ ನಿರೂಪಿಸಿದರು.
1967–68ರ ತಾತ್ಕಾಲಿಕ ಆಯವ್ಯಯವನ್ನು ಮಂಡಿಸುತ್ತ ಅವರು ಪರಿಷ್ಕೃತ ಅಂದಾಜಿನಂತೆ ಪ್ರಸಕ್ತ ಹಣಕಾಸಿನ ವರ್ಷದಲ್ಲಿ 350 ಕೋಟಿ ರೂ.ಗಳ ಖೋತಾ ಆಗುವುದೆಂದು ತಿಳಿಸಿದರು.
ರಾಜ್ಯಗಳಿಗೆ ಇನ್ನು ರಿಸರ್ವ್ ಬ್ಯಾಂಕ್ ಓವರ್ ಡ್ರಾಫ್ಟ್ ಇಲ್ಲ
ನವದೆಹಲಿ, ಮಾ. 20– ‘ರಾಜ್ಯಗಳು ಅಧಿಕ ಪ್ರಮಾಣದಲ್ಲಿ ರಿಸರ್ವ್ ಬ್ಯಾಂಕ್ನಿಂದ ಪಡೆಯುತ್ತಿದ್ದ ಓವರ್ ಡ್ರಾಫ್ಟ್ಗಳ ಕಥೆ ಇನ್ನು ಮುಗಿದಂತೆಯೇ ಸರಿ’ ಎಂದು ಉಪ ಪ್ರಧಾನಿ ಹಾಗೂ ಅರ್ಥ ಸಚಿವ ಮುರಾರಜಿ ದೇಸಾಯಿಯವರು ಪಾರ್ಲಿಮೆಂಟ್ನಲ್ಲಿ 1967–68ರ ತಾತ್ಕಾಲಿಕ ಬಜೆಟ್ ಮಂಡಿಸುತ್ತಾ ತಿಳಿಸಿದರು.
ಶುಕ್ರವಾರ ರಾಜ್ಯ ಬಜೆಟ್ ಮಂಡನೆ
ಬೆಂಗಳೂರು, ಮಾ. 20– ರಾಜ್ಯದ ಮುಂದಿನ ಸಾಲಿನ ಬಜೆಟ್ಟನ್ನು ರಾಜ್ಯ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಶುಕ್ರವಾರದ ದಿನ ಮಂಡಿಸಲಾಗುವುದು. ಗುರುವಾರ ಮಂಡಿಸಲಾಗುವುದೆಂದು ಈ ಮೊದಲು ಪ್ರಕಟಿಸಲಾಗಿತ್ತು.
28ರಂದು ಲೋಕಸಭೆಉಪಾಧ್ಯಕ್ಷರ ಆಯ್ಕೆ
ನವದೆಹಲಿ, ಮಾ. 20– ಮಾರ್ಚಿ 28ರಂದು ಲೋಕಸಭೆಯ ಉಪಾಧ್ಯಕ್ಷರ ಆಯ್ಕೆಯಾಗಬೇಕೆಂದು ಸಭಾಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿಯವರು ನಿಗದಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.