* ಹಲವೆಡೆ ಪ್ರದರ್ಶನ, ಒಂದೆಡೆ ಲಾಠಿ ಪ್ರಹಾರ, 516 ಬಂಧನ
ಬೆಂಗಳೂರು, ಜೂನ್ 26– ನಗರದ ನಾನಾ ಕಡೆಗಳಲ್ಲಿ ಪ್ರತಿಬಂಧಕಾಜ್ಞೆಯನ್ನು ಮುರಿದು ವಿಧಾನಸೌಧದತ್ತ ಸಾಗಲು ಪ್ರಯತ್ನಿಸಿದ ಒಟ್ಟು 266 ಮಂದಿ ‘ವಿಧಾನಸೌಧ ಚಲೋ’ ಚಳವಳಿಗಾರರನ್ನು ಪೋಲೀಸರು ಇಂದು ಬಂಧಿಸಿದರು.
ತಂಡಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಳವಳಿಗಾರರು ಕಾಣಿಸಿಕೊಂಡ ಮೈಸೂರು ಬ್ಯಾಂಕ್ ಸರ್ಕಲ್ ಬಳಿ, ಪೋಲೀಸರ ಮೇಲೆ ಕಲ್ಲು ಎಸೆದ ಪ್ರಕರಣ ನಡೆದು ಪೋಲೀಸರು ಲಘು ಲಾಠಿ ಪ್ರಹಾರ ಮಾಡಿ ನೆರೆದಿದ್ದ ಜನರ ಗುಂಪುನ್ನು ಚದುರಿಸಿದರು.
ಈ ಸರ್ಕಲ್ ಬಳಿ ಬಿ.ಟಿ.ಎಸ್. ಬಸ್ಸುಗಳ ಮೇಲೆ ಕಲ್ಲುಗಳು ಬಿದ್ದು, ಕೆಲವು ಕಿಟಕಿಗಳ ಗಾಜುಗಳು ಪುಡಿಯಾದವು. ಬಸ್ನಲ್ಲಿದ್ದ ಓರ್ವ ಮಹಿಳೆ ಹಾಗೂ 6 ತಿಂಗಳ ಮಗುವಿಗೆ ಗಾಯಗಳಾದವು. ಇಂದು ಬಂಧಿಸಿದ 266 ಮಂದಿ ಸೇರಿ ಈ ಚಳವಳಿ ಸಂಬಂಧವಾಗಿ ಒಟ್ಟು 516 ಮಂದಿಯನ್ನು ಬಂಧಿಸಿದಂತಾಯಿತು.
* ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲಿ ಬದಲಾವಣೆ ಇಲ್ಲ: ಅರ್ಥ ಸಚಿವರ ಪ್ರಕಟಣೆ
ಬೆಂಗಳೂರು, ಜೂ. 26– 1967–68ನೇ ಸಾಲಿನ ಮುಂಗಡ ಪತ್ರದಲ್ಲಿ ವಾಸ್ತವಿಕ ವ್ಯತ್ಯಾಸ ತರುವ ಯಾವುದೇ ಹೊಸ ಬದಲಾವಣೆಯಿಲ್ಲ ಎಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗ್ಗಡೆ ಅವರು ಇಂದು ವಿಧಾನಸಭೆಗೆ ತಿಳಿಸಿದರು.
‘ರಾಜ್ಯದ ಮುಂಗಡ ಪತ್ರದಲ್ಲಿ ಬದಲಾವಣೆಯಾಗಲಿದೆ’ ಎಂಬ ಭಾವನೆಯೊಂದಿಗೆ ಮೇ ತಿಂಗಳಆದಿಯಲ್ಲಿ ಜರುಗಿದ 5 ದಿನಗಳ ಅಧಿವೇಶನ ಮುಗಿಸಿ ಚದುರಿದ ಸದಸ್ಯರು ಇಂದು ಮತ್ತೆ ಸೇರಿದಾಗ ‘ರಾಜ್ಯದ ಈ ವರ್ಷದ ಯೋಜನಾ ವೆಚ್ಚಕ್ಕೆಕೇಂದ್ರವು ಕೊಡಲಿರುವ ನೆರವಿನ
ಪ್ರಮಾಣ 34 ಕೋಟಿಗಳಿಂದ 36 ಕೋಟಿ ರೂಪಾಯಿಗಳಿಗೇರಿದೆ, ಬದಲಾವಣೆಯಿದ್ದರೆ ಇದೊಂದು ಮಾತ್ರ’ ಎಂದು ಅರ್ಥ ಸಚಿವರು ಅವರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.