ಗಾಂಧಿ ಕೊಲೆ ಬಗ್ಗೆ ಕಪೂರ್ ಆಯೋಗದ ವಿಚಾರಣೆ ಪ್ರಾರಂಭ
ಮುಂಬೈ, ಮಾ. 6– ಮಹಾತ್ಮ ಗಾಂಧಿಯವರ ಕೊಲೆಗೆ ಸಂಬಂಧಿಸಿದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲು ಭಾರತ ಸರ್ಕಾರ ನೇಮಿಸಿರುವ ಏಕಸದಸ್ಯ ಕಪೂರ್ ಆಯೋಗವು ಇಂದು ಇಲ್ಲಿನ ಸಚಿವಾಲಯದಲ್ಲಿ ಕಾರ್ಯಾರಂಭ ಮಾಡಿತು.
ಪುಣೆಯ ದಿನಪತ್ರಿಕೆಗಳಾದ ‘ಕೇಸರಿ’ ಮತ್ತು ‘ತರುಣ ಭಾರತ್’ನ ಮಾಜಿ ಸಂಪಾದಕರಾದ ಶ್ರೀ ಜಿ.ವಿ. ಕೇತ್ಕರ್ ಮತ್ತು ಶ್ರೀ ಎಂ.ಜಿ. ಕಾನಿತ್ಕರ್ ಅವರು ಇಂದು ತಮ್ಮ ಸಾಕ್ಷ್ಯಗಳನ್ನು ನೀಡಿದರು. ಕೇತ್ಕರ್ರವರು ನಾಳೆ ತಮ್ಮ ಸಾಕ್ಷ್ಯಗಳನ್ನು ಮುಂದುವರಿಸುವರು.
ಈಗ ಪ್ರಾರಂಭವಾಗಿರುವ ವಿಚಾರಣೆಯು ಮಾರ್ಚಿ 9ರ ವರೆಗೆ ನಡೆಯುವುದು. ಆನಂತರ ಆಯೋಗದ ಅಧ್ಯಕ್ಷ ಶ್ರೀ ಜೀವನ್ ಲಾಲ್ ಎಲ್. ಕಪೂರ್ರವರು ದೆಹಲಿಗೆ ಹಿಂತಿರುಗಿ ಅಲ್ಲಿ ತಮ್ಮ ಕಾರ್ಯವನ್ನು ಮುಂದುವರಿಸುವರು.
**
ಲೋಕಸಭಾ ಸದಸ್ಯ ಶ್ರೀ ಎಸ್.ಜಿ. ಬರ್ವೆ ಅವರ ನಿಧನ
ನವದೆಹಲಿ, ಮಾ. 6– ವಿಶ್ವದ ಆಸಕ್ತಿಯನ್ನು ಕೆರಳಿಸಿದ ಸ್ಪರ್ಧೆಯಲ್ಲಿ ಮಾಜಿ ರಕ್ಷಣಾ ಸಚಿವ ಶ್ರೀ ವಿ.ಕೆ. ಕೃಷ್ಣ ಮೆನನ್ರನ್ನು ಸೋಲಿಸಿ ಲೋಕಸಭೆಗೆ ಚುನಾಯಿತರಾದ ಯೋಜನಾ ಮಂಡಳಿಯ ಮಾಜಿ ಸದಸ್ಯ ಶ್ರೀ ಎಸ್.ಜಿ. ಬರ್ವೆಯವರು ಇಂದು ರಾತ್ರಿ 10 ಗಂಟೆಯ ಹೊತ್ತಿನಲ್ಲಿ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.
ಅವರಿಗೆ 52 ವರ್ಷ ವಯಸ್ಸಾಗಿತ್ತು. ಇಂದು ದಿನವೆಲ್ಲಾ ಚಟುವಟಿಕೆಯಿಂದಲೇ ಇದ್ದ ಅವರು ಕುಸಿದು ಬೀಳುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು ಯಾವುದೋ ಕೆಲಸಕ್ಕೆ ಗಮನವೀಯುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.