ಬಿಹಾರದಲ್ಲಿ ಅನ್ನ ಇಲ್ಲದೆ 157 ಸಾವು
ಮುಂಬೈ, ಏ. 21– ಬಿಹಾರ್ ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ಕ್ಷಾಮದಿಂದ ಸುಮಾರು 157 ಮಂದಿ ಮರಣ ಹೊಂದಿದರೆಂದು ರಾಜ್ಯ ಮುಖ್ಯಮಂತ್ರಿ ಶ್ರೀ ಮಹಾಮಾಯ ಪ್ರಸಾದ್ ಸಿನ್ಹ ಅವರು ತಿಳಿಸಿದರು.
ಇಲ್ಲಿನ ಪತ್ರಿಕೋದ್ಯೋಗಿಗಳ ಸಂಘದ ‘ಪತ್ರಿಕಾ ಸಂದರ್ಶನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಯುತರು, ಬಿಹಾರ್ ರಾಜ್ಯದ ಕ್ಷಾಮ ಮತ್ತು ಕುಡಿಯುವ ನೀರಿನ ಅಭಾವದ ಸ್ಪಷ್ಟ ಚಿತ್ರಣ ನೀಡಿದರು.
***
ಗ್ರೀಸ್ನಲ್ಲಿ ಸೇನಾಕ್ರಾಂತಿ; ರಾಜರ ಆಜ್ಞೆಯಂತೆ ಕ್ರಮ
ಲಂಡನ್, ಏ. 21– ಕಳೆದ 18 ದಿನಗಳಿಂದ ಅಧಿಕಾರದಲ್ಲಿದ್ದ ಗ್ರೀಸ್ನ ಪನಯೊಟಿಸ್ ಅವರ ಸರ್ಕಾರವು ಇಂದು ಸೇನಾ ಕ್ರಾಂತಿಯೊಂದರಿಂದ ಪದಚ್ಯುತಿ ಹೊಂದಿತು. ಇಂದು ಬೆಳಿಗ್ಗೆ ಈ ಬಗ್ಗೆ ಪ್ರಸಾರ ಮಾಡಲಾದ ಬಾತ್ಮಿಯಲ್ಲಿ ದೊರೆ ಕಾನ್ಸ್ಟೆಂಟೈನ್ ಅವರು ಸಹಿ ಮಾಡಿ ಇತ್ತ ಆಜ್ಞೆಯಂತೆ ಸೇನೆಯು ಗ್ರೀಸ್ನ ಆಡಳಿತವನ್ನು ವಹಿಸಿಕೊಂಡಿದೆಯೆಂದು ತಿಳಿಸಿಲಾಗಿದೆ.
ನಗರದಲ್ಲಿನ ವಾಹನಗಳನ್ನು ರಸ್ತೆಗೆ ತರಬಾರದಾಗಿ ಸೇನೆಯು ಅಥೆನ್್ಸ ನಾಗರಿಕರಿಗೆ ಎಚ್ಚರಿಕೆ ನೀಡಿದೆಯಲ್ಲದೆ ಸಾರ್ವಜನಿಕರು ಆಹಾರ ಧಾನ್ಯವನ್ನು ದಾಸ್ತಾನು ಮಾಡಬಾರದಾಗಿ ಆಜ್ಞಾಪಿಸಿದೆ.
***
ಡಾ. ಜಾಕಿರ್ ಹುಸೇನ್ಗೆ ಜಯಪ್ರಕಾಶ್ ಬೆಂಬಲ
ಕಲ್ಕತ್ತ, ಏ. 21– ರಾಷ್ಟ್ರಪತಿ ಸ್ಥಾನಕ್ಕೆ ಡಾ. ಜಾಕಿರ್ ಹುಸೇನ್ ಅವರನ್ನು ಚುನಾಯಿಸಬೇಕೆಂದು ಸರ್ವೋದಯ ನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರು ಎಲ್ಲಾ ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದರಿಂದ ವಿಶ್ವ ದೃಷ್ಟಿಯಲ್ಲಿ ನಮ್ಮ ರಾಷ್ಟ್ರ ಗೌರವಕ್ಕೆ ಚ್ಯುತಿ ಬರುವುದಿಲ್ಲ ಎಂದೂ ಅವರು ಇಂದು ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.