ADVERTISEMENT

ಶುಕ್ರವಾರ 11 ಆಗಸ್ಟ್ 2017

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2017, 19:30 IST
Last Updated 10 ಆಗಸ್ಟ್ 2017, 19:30 IST

ಆ. 15 ರಂದು ಸರ್ಕಾರದ ಭಾಷಾ ನೀತಿ ಪ್ರಕಟಣೆ: ಸ್ವಾತಂತ್ರ್ಯ ದಿನದ ಕಾಣಿಕೆ
ನವದೆಹಲಿ, ಆ. 10–
ಭಾಷಾ ಸಮಸ್ಯೆಯ ಬಗ್ಗೆ ಸರ್ಕಾರದ ನಿರ್ಧಾರವನ್ನು ರೂಪಿಸಲಾಗುತ್ತಿದ್ದು ಅದನ್ನು ಸ್ವಾತಂತ್ರ್ಯದ ದಿನವಾದ ಆಗಸ್ಟ್ 15 ರಂದು ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಡಾ. ತ್ರಿಗುಣ ಸೆನ್‌ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.

ಶಿಕ್ಷಣ ಆಯೋಗ ಮತ್ತು ಶಿಕ್ಷಣದ ಬಗ್ಗೆ ಪಾರ್ಲಿಮೆಂಟ್‌ ಸದಸ್ಯರ ವರದಿಗಳ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, ಭಾಷಾ ನೀತಿಯ ವಿವರಗಳು ಏನೇ ಇದ್ದರೂ ಅವರು ಮೂರು ಆಧಾರಗಳನ್ನವಲಂಬಿಸಿರಬೇಕು ಎಂದರು. ಆ ಮೂರು ಆಧಾರಗಳು:–

(1) ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಪ್ರದೇಶಿಕ ಭಾಷೆಗಳೇ ಶಿಕ್ಷಣ ಮಾಧ್ಯಮವಾಗಬೇಕು.

ADVERTISEMENT

(2) ಸಂಪರ್ಕ ಭಾಷೆಯ ಅಭಿವೃದ್ಧಿ. ಅದು ಅನಿವಾರ್ಯವಾಗಿ ಹಿಂದಿಯೇ ಆಗಬೇಕು. ಆದರೆ ಈ ವಿಷಯದಲ್ಲಿ ‘ಹಿಂದಿಯೇತರ ಜನರನ್ನು ನಮ್ಮ ಜೊತೆಯಲ್ಲಿಟ್ಟುಕೊಳ್ಳಬೇಕು.’

(3) ಇಂಗ್ಲೀಷ್‌ ಶಿಕ್ಷಣ ಮಾಧ್ಯಮವಾಗಿರುವುದು ನಮಗಿಷ್ಟವಿಲ್ಲ. ಎಂದರೆ ಇಂಗ್ಲೀಷನ್ನು ತ್ಯಜಿಸಬೇಕು ಎಂದರ್ಥವಲ್ಲ. ಅದನ್ನು ‘ಗ್ರಂಥ ಭಂಡಾರದ’ ಭಾಷೆಯಾಗಿಟ್ಟುಕೊಂಡು ಇನ್ನಷ್ಟು ಚೆನ್ನಾಗಿ ಓದಬೇಕು. ನಾವು ಇತರ ವಿದೇಶೀ ಭಾಷೆಗಳನ್ನೂ ಓದಬೇಕು.

ನಕ್ಸಲ್‌ಬಾರಿಯ ಉಗ್ರವಾದಿಗಳ ಪಲಾಯನ ತಡೆಗಟ್ಟಲು ಕ್ರಮ
ನವದೆಹಲಿ, ಆ. 10–
ನಕ್ಸಲ್‌ಬಾರಿಯ ಉಗ್ರವಾದಿಗಳು ನೇಪಾಳ ಅಥವಾ ಪೂರ್ವ ಪಾಕಿಸ್ತಾನಕ್ಕೆ ತೆರಳದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ಶ್ರೀ ವೈ.ಬಿ. ಚವಾಣ್‌ ಇಂದು ಲೋಕಸಭೆಗೆ ತಿಳಿಸಿದರು.

ಶ್ರೀ ಮಧುಲಿಮಯೆ ಹಾಗೂ ಇತರ ನಾಲ್ವರು ಮಂಡಿಸಿದ ಗಮನಸೆಳೆಯುವ ನಿರ್ಣಯವೊಂದಕ್ಕೆ ಅವರು ಉತ್ತರ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.