ಕೇಂದ್ರದ ಹುದ್ದೆಗಳಿಗೆ ಸೇರಲು ತ್ರಿಭಾಷಾ ಜ್ಞಾನ
ಬೆಂಗಳೂರು, ಮಾ. 28– ಮೂರು ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಕೇಂದ್ರದ ನೌಕರಿಗೆ ಸೇರಬಯಸುವವರಿಗೆ 3 ಭಾಷೆಗಳಲ್ಲಿ ಜ್ಞಾನವಿರಬೇಕೆಂದು ಗೊತ್ತು ಮಾಡಬೇಕೆಂದು ರಾಜ್ಯ ಸರಕಾರ ಕೇಂದ್ರಕ್ಕೆ ತಿಳಿಸಲಿದೆ.
ಅಂಕ್ಟಾಡ್ ವಿಫಲ
ನವದೆಹಲಿ, ಮಾ. 28– ದ್ವಿತೀಯ ‘ಅಂಕ್ಟಾಡ್’ ಸಮ್ಮೇಳನ ಬಹಳ ಪರಿಮಿತ ಪ್ರಗತಿ ಸಾಧಿಸಿದ್ದರೂ ಅದು ‘ವಿಫಲ’ಗೊಂಡಿದೆಯೆಂದು ಬ್ರೆಜಿಲ್ ನಿಯೋಗದ ನಾಯಕ ಹಾಗೂ 77 ರಾಷ್ಟ್ರಗಳ ತಂಡದ ಅಧ್ಯಕ್ಷ ಸಿಲ್ವೇರಾ ಇಂದು ಹೇಳಿದರು.
ರಾಜ್ಯಸಭೆಗೆ ಮಲ್ಲಪ್ಪ, ಪುಟ್ಟಪ್ಪ, ಕೆಂಪರಾಜ್ ಮತ್ತು ಲಕ್ಷ್ಮಣಗೌಡ
ಬೆಂಗಳೂರು, ಮಾ. 28– ಕಾಂಗ್ರೆಸ್ ಸ್ಪರ್ಧಿಗಳಾದ ಸರ್ವಶ್ರೀ ಕೊಲ್ಲೂರು ಮಲ್ಲಪ್ಪ, ಪಾಟೀಲ ಪುಟಪ್ಪ ಮತ್ತು ಜಿ.ಟಿ. ಕೆಂಪರಾಜ್ ಹಾಗೂ ವಿರೋಧ ಪಕ್ಷಗಳ ಬೆಂಬಲ ಪಡೆದಿದ್ದ ಶ್ರೀ ಯು.ಕೆ. ಲಕ್ಷ್ಮಣಗೌಡ ಅವರುಗಳು ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.
ವಿಧಾನಸಭಾ ಕ್ಷೇತ್ರದಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಮತದಾನ ನಡೆಯಿತು.
ವಿಮಾನ ಅಪಘಾತ: ಪ್ರಥಮ ಗಗನಯಾತ್ರಿ ಗಗಾರಿನ್ ಸಾವು
ಮಾಸ್ಕೋ, ಮಾ. 28– ಪ್ರಪಂಚದ ಪ್ರಥಮ ಗಗನಯಾತ್ರಿ ಯೂರಿ ಗಗಾರಿನ್ ಅವರು ನಿನ್ನೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾದರೆಂದು ಮಾಸ್ಕೋ ರೇಡಿಯೋ ಇಂದು ಪ್ರಕಟಿಸಿತು. ಎಂಜಿನಿಯರ್–ಕರ್ನಲ್ ವ್ಲಾಡಿಮಿರ್ ಸೆರ್ಜೆವಿಕ್ ಸೆಯೊಗಿನ್ ಎಂಬುವರ ಜೊತೆ ಹೊಸ ವಿಮಾನವೊಂದರ ಪ್ರಯೋಗಾರ್ಥ ಹಾರಾಟ ನಡೆಸುತ್ತಿದ್ದಾಗ ಅಪಘಾತ ಸಂಭವಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.