ADVERTISEMENT

ಶುಕ್ರವಾರ, 30–6–1967

​ಪ್ರಜಾವಾಣಿ ವಾರ್ತೆ
Published 29 ಜೂನ್ 2017, 16:47 IST
Last Updated 29 ಜೂನ್ 2017, 16:47 IST

* ಕೇಂದ್ರ ನೌಕರರ ತುಟ್ಟಿಭತ್ಯ ಏರಿಕೆ ಪ್ರಶ್ನೆ: ನಿರ್ಧಾರಕ್ಕೆ ‘ಸ್ವಲ್ಪ ಕಾಲ’ ಬೇಕೆಂದು ಮುರಾರಜಿ
ನವದೆಹಲಿ, ಜೂ. 29–
ಕೇಂದ್ರ ಸರ್ಕಾರದ ನೌಕರರಿಗೆ ಹೆಚ್ಚಿನ ತುಟ್ಟಿಭತ್ಯವನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಗಜೇಂದ್ರಗಡ್ಕರ್‌ ಆಯೋಗವು ಮಾಡಿರುವ ಸಲಹೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ‘ಸ್ವಲ್ಪಕಾಲ ಬೇಕು’ ಎಂದು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯ್‌ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

* ಕನ್ನಡ ಆಡಳಿತ ಭಾಷೆ ಶೀಘ್ರದಲ್ಲೇ ಜಾರಿಗೆ: ಪಾರಿಭಾಷಿಕ ಶಬ್ದ ಪರಿಶೀಲನೆ
ಬೆಂಗಳೂರು, ಜೂ. 29– 
ಕನ್ನಡ ಆಡಳಿತ ಭಾಷೆಯಾಗುವ ವಿಚಾರದಲ್ಲಿ ಶಬ್ದ ಸಂಗ್ರಹಕ್ಕಾಗಿ ನೇಮಿಸಿದ್ದ ಸಮಿತಿಯು ಕಳೆದ ಏಪ್ರಿಲ್‌ 5 ರಂದು ವರದಿ ಸಲ್ಲಿಸಿದೆಯೆಂದೂ ಆದಷ್ಟು ಬೇಗ ಕನ್ನಡವನ್ನು ಅಧಿಕಾರದ ಭಾಷೆಯನ್ನಾಗಿ ಮಾಡಲಾಗುವುದೆಂದೂ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪ ಅವರು ಇಂದು ವಿಧಾನಸಭೆಗೆ ತಿಳಿಸಿದರು.

ಶ್ರೀ ವಾಟಾಳ್‌ ನಾಗರಾಜ್‌ ಮತ್ತು ಶ್ರೀ ಅಂದಾನಪ್ಪ ದೊಡ್ಡಮೇಟಿ ಅವರ ಪ್ರಶ್ನೆಗಳಿಗೆ ಉತ್ತರವಿತ್ತ ಮುಖ್ಯ ಮಂತ್ರಿಯವರು 1963ರಲ್ಲಿ ಅಧಿಕೃತ ಭಾಷಾ ಕಾನೂನು ಮಾಡಲಾಯಿತು. ಅದರಲ್ಲಿ ಕೆಲವು ತೊಂದರೆಗಳು ಮುಂಬಂದುದರಿಂದ ಸರಕಾರಿ ಕಚೇರಿಗಳಲ್ಲಿ ಪ್ರತಿನಿತ್ಯ ಬಳಸುವ ಪಾರಿಭಾಷಿಕ ಶಬ್ದಗಳ ಸಂಗ್ರಹಕ್ಕೆ ಹಾಗೂ ಕನ್ನಡವನ್ನು ಅಧಿಕೃತ ಭಾಷೆ ಮಾಡುವ ಬಗ್ಗೆ ಸಲಹೆಗಳನ್ನು ನೀಡಲು ಸಮಿತಿ ರಚಿಸಲಾಯಿತು.

ADVERTISEMENT

ಈಗ ವರದಿ ಬಂದಿದೆ. ಸೆಕ್ರೆಟೇರಿಯೇಟ್‌ ಮತ್ತು ಇತರ ಕಚೇರಿಗಳಲ್ಲಿ ಕನ್ನಡ ಭಾಷಾ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಈಗಾಗಲೇ 119 ಕನ್ನಡ ಟೈಪ್‌ರೈಟರ್‌ಗಳನ್ನು ಬಳಕೆಗೆ ತರಲಾಗಿದೆ. ‘ಕನ್ನಡ ಟೈಪಿಸ್‌್ಟಗಳ ನೇಮಕಕ್ಕೆ ಅವಕಾಶ ಕಲ್ಪಿಸಿ, ಕನ್ನಡ ಟೈಪಿಸ್ಟ್‌ ಮತ್ತು ಶೀಘ್ರ ಲಿಪಿಗಾರರಿಗೆ ತಲಾ 20 ಮತ್ತು 30 ರೂ. ವಿಶೇಷ ಸಂಬಳ ನೀಡಲಾಗುವುದು ಎಂದು ವಿವರಿಸಿದರು.

* ವಿಧಾನ ಪರಿಷತ್‌ ಭೂ ಕಂದಾಯ ಉಳಿಯಲೆಂದು ಒತ್ತಾಯ
ಬೆಂಗಳೂರು, ಜೂ. 29–
ಭೂ ಕಂದಾಯ ರದ್ದಾಗಬೇಕೆಂಬುದನ್ನು ಆಳುವ ಪಕ್ಷದ ಇಬ್ಬರು ಸದಸ್ಯರು ಇಂದು ವಿಧಾನ ಪರಿಷತ್ತಿನಲ್ಲಿ ವಿರೋಧಿಸಿ ‘ರೈತನಿಗೆ ಇಂದು  ಕಂದಾಯ ಅಂಥ ಹೊರೆಯೇನೂ ಆಗಿಲ್ಲ’ವೆಂದು ಅಭಿಪ್ರಾಯಪಟ್ಟರು. ಈ ಅಭಿಪ್ರಾಯವನ್ನು ಮಂಡಿಸಿದವರು ಕಾಂಗ್ರೆಸ್‌ ಸದಸ್ಯರಾದ ಶ್ರೀ ವಿ.ಎಸ್‌. ಹಿರೇಗೌಡ ಮತ್ತು ಶ್ರೀ ಕೆ. ಸುಬ್ಬರಾವ್‌ ಅವರುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.