ಮಹಾಜನ್ ಶಿಫಾರಸು ಮಾರ್ಪಡಿಸುವ ಯತ್ನಕ್ಕೆ ರಾಜ್ಯದ ವಿರೋಧ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ನ. 2– ಮಹಾಜನ್ ಆಯೋಗದ ತೀರ್ಪನ್ನು ಮಾರ್ಪಡಿಸುವ ಕೇಂದ್ರ ಸರ್ಕಾರದ ಯಾವುದೇ ಪ್ರಯತ್ನವನ್ನು ತಮ್ಮ ಸರ್ಕಾರವು ತೀವ್ರವಾಗಿ ವಿರೋಧಿಸುವುದೆಂದು ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ಸ್ಪಷ್ಟವಾಗಿ ತಿಳಿಸಿದರು.
ಮಹಾಜನ್ ಆಯೋಗದ ಶಿಫಾರಸನ್ನು ಮಾರ್ಪಡಿಸಿದರೆ ಭಾರತದ ಮಾಜಿ ಶ್ರೇಷ್ಠ ನ್ಯಾಯಾಧೀಶರಿಗೆ ಭಾರಿ ಅಪಚಾರ ಮಾಡಿದಂತಾಗುವುದೆಂದೂ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತ ಹೇಳಿದರು.
ಮೈಸೂರು ಮತ್ತು ಮಹಾರಾಷ್ಟ್ರ ಸರ್ಕಾರಗಳೆರಡೂ ಮಹಾಜನ್ರಂತಹ ಗಣ್ಯ ವ್ಯಕ್ತಿಯೊಬ್ಬರು ನೀಡಿರುವ ತೀರ್ಪನ್ನು ಯಾವ ಗೊಣಗಾಟವೂ ಇಲ್ಲದೆ ಅಂಗೀಕರಿಸಬೇಕೆಂದೂ ಶ್ರೀ ನಿಜಲಿಂಗಪ್ಪನವರು ಹೇಳಿದರು.
‘ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಕುರಿತ ಮಹಾಜನ್ ಆಯೋಗದ ವರದಿ ಸಂಬಂಧವಾಗಿ ಇನ್ನೂ ಹೆಚ್ಚು ಮಾತುಕತೆಗೆ ಮೈಸೂರು ಸಿದ್ಧವಿಲ್ಲ. ಮೈಸೂರಿನ ಮಟ್ಟಿಗೆ ಹೇಳುವುದಾದರೆ ಮಹಾಜನ್ ವರದಿಯೇ ಆಖೈರು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.