* ಅನುಮತಿ ಪಡೆಯದೆ ಸಂಸತ್ ಸದಸ್ಯರಿಂದ ಕಾರು ಮಾರಾಟ: ಪ್ರಧಾನಿ ಹೇಳಿಕೆ
ನವದೆಹಲಿ, ಮಾ. 24– ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆಯದೆ ಶಾಸನಬದ್ಧವಾದ ಎರಡು ವರ್ಷಗಳ ಅವಧಿಯೊಳಗೇ ಕೆಲವು ಸಂಸತ್ ಸದಸ್ಯರು ತಮ್ಮ ಕಾರುಗಳನ್ನು ಮಾರಿ ಕೊಂಡಿದ್ದಾರೆಂಬ ಬಗ್ಗೆ ಸೋಮವಾರ ಲೋಕಸಭೆಯಲ್ಲಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಹೇಳಿಕೆ ನೀಡುವರು.
ಕಳೆದ ನವಂಬರ್ನಿಂದ ಈ ಬಗ್ಗೆ ನಡೆಯುತ್ತಿರುವ ವಿವಾದ ಪ್ರಧಾನಿ ಹೇಳಿಕೆಯೊಂದಿಗೆ ಮುಕ್ತಾಯಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.
*ನಂದಿಬೆಟ್ಟದಲ್ಲಿ ಈಜು ಕೊಳ: ಪ್ರವಾಸಿ ಗೃಹ (ವಿಶೇಷ ಪ್ರತಿನಿಧಿಯಿಂದ)
ಬೆಂಗಳೂರು, ಮಾ. 24– ಗಿರಿಧಾಮ ನಂದಿಬೆಟ್ಟವನ್ನು ಪ್ರವಾಸೀ ಕೇಂದ್ರವನ್ನಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸಿದೆ.
ನಗರದಿಂದ 37 ಮೈಲಿ ದೂರದಲ್ಲಿರುವ ಸುಮಾರು 4800 ಅಡಿ ಎತ್ತರದ ನಂದಿಬೆಟ್ಟ ವರ್ಷ ಪೂರ್ತಿ ಇರುವ ಹಿತಕರ ಹವೆಯಿಂದಾಗಿ, ಆರೋಗ್ಯಧಾಮವೆಂದು ಪ್ರಸಿದ್ಧಿ ಹೊಂದಿದೆ.
ಗಿರಿ ಶೃಂಗದ ದಕ್ಷಿಣ ಮಗ್ಗುಲಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು 1.6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಆಧುನಿಕ ಉಪಾಹಾರ ಗೃಹದ ಕಟ್ಟಡವನ್ನು ಇಂದು ಉದ್ಘಾಟಿಸಿದ ಪ್ರವಾಸೋದ್ಯಮ ಸಚಿವ ಮಹ್ಮದಾಲಿ ಅವರು, ಬೆಟ್ಟದ ಮೇಲೆ 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈಜು ಕೊಳ ಹಾಗೂ ಲಕ್ಷ ರೂ. ವೆಚ್ಚದಲ್ಲಿ ಪ್ರವಾಸೀ ಗೃಹಗಳನ್ನು ನಿರ್ಮಿಸುವುದಾಗಿ ತಿಳಿಸಿದರು.
*ಪತ್ನಿ ಕೊಲೆ ಆರೋಪಕ್ಕೆ ತಹಸೀಲ್ದಾರ್ ಬಂಧನ
ವಿಶಾಖಪಟ್ಟಣ, ಮಾ. 24– ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಇಲ್ಲಿ ಭೂ ಸ್ವಾಧೀನ ತಹಸೀಲ್ದಾರೊಬ್ಬರನ್ನು ಬಂಧಿಸಲಾಗಿದೆ.
ಬಾಯಿಗೆ ಬಟ್ಟೆ ಕಟ್ಟಲ್ಪಟ್ಟಿದ್ದ ಆಕೆ ತನ್ನ ಹಾಸಿಗೆಯಲ್ಲಿ ಸತ್ತು ಬಿದ್ದಿದ್ದುದು ಕಂಡು ಬಂದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.