ADVERTISEMENT

ಅಜಲು ರಹಿತ ಕಂಬಳವಿರಲಿ; ಆಚರಣೆ ಬೇಡ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2017, 19:30 IST
Last Updated 26 ಜನವರಿ 2017, 19:30 IST
ಅಜಲು ರಹಿತ ಕಂಬಳವಿರಲಿ; ಆಚರಣೆ ಬೇಡ
ಅಜಲು ರಹಿತ ಕಂಬಳವಿರಲಿ; ಆಚರಣೆ ಬೇಡ   
ತಮಿಳುನಾಡಿನ ‘ಜಲ್ಲಿಕಟ್ಟು’ವಿಗೆ ಅನುಮತಿ ಸಿಕ್ಕಿದ ಮೇಲೆ ಕರ್ನಾಟಕದಲ್ಲಿ ‘ಕಂಬಳ’ದ ಆಚರಣೆಗಾಗಿ ಒತ್ತಾಯ ಭುಗಿಲೆದ್ದಿದೆ. ಕಂಬಳವು ಜಲ್ಲಿಕಟ್ಟುವಿನಷ್ಟು ಪ್ರಾಣಾಂತಿಕವಾಗಿಲ್ಲ. ಆದರೆ, ಕಂಬಳ ಆಟ ಮಾತ್ರವಲ್ಲ, ಈ ಆಟದೊಳಗೆ ಅನಿಷ್ಟ ಆಚರಣೆಯೊಂದು ಅಡಗಿಕೂತಿದೆ. ಅದೆಂದರೆ, ಕೊರಗ ಸಮುದಾಯವನ್ನು ಬಳಸಿಕೊಂಡು ಜರುಗುವ ‘ಪನಿಕುಲ್ಲುನೆ’ ಆಚರಣೆ. ಅಂದರೆ, ಕಂಬಳ ನಡೆಯುವ ಹಿಂದಿನ ದಿನದ ಇಡೀ ರಾತ್ರಿ ಕೊರಗ ಸಮುದಾಯದವರು ಡೋಲು ಬಾರಿಸುತ್ತ ಕುಣಿಯುವ ಈ ಆಚರಣೆಯು ಲೈಂಗಿಕ ಚೇಷ್ಟೆಗಳನ್ನು ಒಳಗೊಂಡಿದ್ದು, ಬೆಳಗಾಗುವಾಗ ಕೊರಗ ಸಮುದಾಯದವರು ತಾವೇ ಕೋಣಗಳು ಎಂದು ಆವಾಹಿಸಿಕೊಂಡು ಕಂಬಳದ ಕೆಸರುಗದ್ದೆಯಲ್ಲಿ ಓಡುತ್ತಾರೆ. ನಡೆಯುತ್ತದೆ, ಈ ಮನುಷ್ಯರ ಕೆಸರುಗದ್ದೆ ಓಟ ಕೋಣಗಳ ಓಟಕ್ಕೆ ಪೂರ್ವಭಾವಿಯಾಗಿ! 
 
‘ಕೊರಗರು ಕೋಣಗಳಾಗಿ ಗದ್ದೆಯಲ್ಲಿ ಓಡುವುದರ ಮೂಲಕ ಗದ್ದೆಯನ್ನು ಕೆಟ್ಟಕಣ್ಣಿನಿಂದ ಮುಕ್ತಗೊಳಿಸುತ್ತಾರೆ. ಗದ್ದೆಯನ್ನು ಹೀಗೆ ಮುಕ್ತಗೊಳಿಸಿದ ಆನಂತರವೇ ಭೂಮಾಲಿಕರ  ಕೋಣಗಳು ಕಂಬಳದ ಗದ್ದೆಗೆ ಇಳಿಯುತ್ತವೆ’  (ಕರಾವಳಿ ಜಾನಪದ; ಪುರುಷೋತ್ತಮ ಬಿಳಿಮಲೆ; ಪುಟ 46). ಅಂದರೆ, ಇದು ಅನಿಷ್ಟ, ಕೆಡುಕನ್ನು ಕೊರಗರ ಮೇಲೆ ಆವಾಹಿಸುವ ಅಜಲು ಪದ್ಧತಿಯ ಎಂಜಲು ಆಚರಣೆ. ಹಾಗೆ ಕಂಬಳದ ಹಿಂದಿನ ರಾತ್ರಿ ಜರುಗುವ ಲೈಂಗಿಕ ಚೇಷ್ಟೆ ಕ್ರಿಯೆಗಳನ್ನು ಫಲವಂತಿಕೆಗಾಗಿ ಅನ್ನುವುದಾದರೆ ಕಂಬಳದ ಸಿರಿವಂತಿಕೆಯನ್ನು ಪ್ರದರ್ಶಿಸುವ ಫಲಾನುಭವಿಗಳಾದ ಭೂಮಾಲಿಕ ಕುಟುಂಬದ ಸ್ತ್ರೀ– ಪುರುಷರು ಇದನ್ನು ಆಚರಿಸಬಾರದೇಕೆ? ಕೊರಗ ಸಮುದಾಯಕ್ಕೆ ಸೇರದೆ ಇರುವವರು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.
 
ಒಟ್ಟಿನಲ್ಲಿ, ಅಜಲು ಪದ್ಧತಿಯ ಎಂಜಲಾದ ‘ಪನಿಕುಲ್ಲುನೆ’ ಆಚರಣೆಯನ್ನು ಕೈಬಿಟ್ಟು ಕಂಬಳವನ್ನು ಒಂದು ಆಟವಾಗಿ ಉಳಿಸಿಕೊಳ್ಳಬಹುದೇನೊ. ಇದಕ್ಕೆ ಮೊದಲು ಸರ್ಕಾರ ಅನಿಷ್ಟ ಅಜಲು ಪದ್ಧತಿಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದು ತನ್ನ ಮಾನಮರ್ಯಾದೆ ಕಾಪಾಡಿಕೊಳ್ಳಬೇಕಾಗಿದೆ.  ಈ ಉದ್ರೇಕದ ಗದ್ದಲದ ಸಂದರ್ಭದಲ್ಲಿ-  ‘ಇಂಥದ್ದಕ್ಕೆಲ್ಲ ಹೋರಾಡುವ ಬದಲು ಮರಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಉಳಿಸಿಕೊಳ್ಳೋಣ’ ಎಂದು ವಿವೇಕ ವಿವೇಚನೆಗಳೊಡನೆ ನಾಡಿನ ಯಜಮಾನನಾಗಿ ಕರೆ ನೀಡಿದ  ಹಂಸಲೇಖ ಅವರನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳಬೇಕಾಗಿದೆ.
–ದೇವನೂರ ಮಹಾದೇವ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.