ADVERTISEMENT

ಅರಿವು ಮೂಡಿಸಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST

‘ಅಂಥ್ರಾಕ್ಸ್ ಸೋಂಕಿನಿಂದ ಹಸುಗಳ ಸಾವು’ ಶೀರ್ಷಿಕೆಯಡಿ ಪ್ರಕಟವಾಗಿರುವ ಸಚಿತ್ರ ವರದಿ (ಪ್ರ.ವಾ., ಜೂನ್‌ 24) ಓದಿದ ಮೇಲೆ ಈ ಸೋಂಕಿನ ಬಗ್ಗೆ ನಮ್ಮ ರೈತರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಅನ್ನಿಸಿತು.

ಈ ಸೋಂಕಿನಿಂದ ಸಾವನ್ನಪ್ಪಿದ  ಹಸುಗಳ ಮೃತದೇಹಗಳೊಂದಿಗೆ ಕೊಪ್ಪಳ ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ವಿಷಯ ಓದಿ ಪಶುವೈದ್ಯನಾದ ನನಗೆ ಅತ್ಯಂತ ಆತಂಕ ಉಂಟಾಯಿತು. ಅಂಥ್ರಾಕ್ಸ್ ಒಂದು ಮಾರಣಾಂತಿಕ  ಅಂಟು  ಜಾಡ್ಯ. ಅಲ್ಲದೆ ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ಸೋಂಕು ಕೂಡ ಹೌದು. ಸಾಮಾನ್ಯವಾಗಿ ಮುಂಗಾರು ಮಳೆ ಪ್ರಾರಂಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸ್ಥಳೀಯ ಅಗತ್ಯ ಅನುಸಾರ ಪಶುವೈದ್ಯರು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ.

ನಿಯಮಿತವಾಗಿ ಸಾಮೂಹಿಕ ಲಸಿಕೆ ಮಾಡಲಾಗುವುದಿಲ್ಲ. ಈ ಸೋಂಕಿನಿಂದ ಸಾವನ್ನಪ್ಪಿದ ಜಾನುವಾರುಗಳನ್ನು ಪಶುವೈದ್ಯರ ಸಲಹೆಯಂತೆ ಸೂಕ್ತ ರೀತಿಯಲ್ಲಿ ಸುಡಲು ಅಥವಾ ಹೂಳಲು ಕ್ರಮ ಕೈಗೊಳ್ಳಬೇಕು. ಸತ್ತ ಜಾನುವಾರುಗಳೊಂದಿಗೆ ಮೆರವಣಿಗೆ ನಡೆಸುವುದು ತರವಲ್ಲ. ರೈತರು ತಮಗೆ ಆಗಿರುವ ಅನ್ಯಾಯವನ್ನು ಬೇರೆ ವಿಧಾನಗಳಿಂದ ಸರ್ಕಾರದ ಗಮನಕ್ಕೆ ತರಬೇಕೆ ಹೊರತು ಈ ರೀತಿ ಅಲ್ಲ. ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಅಗತ್ಯ ಇದೆ.
ಡಾ. ಪ್ರಕಾಶ ರೆಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.