ADVERTISEMENT

ಕಡಿತ ಸರಿಯೇ?

ಕೌಡ್ಲೆ ರವಿ ಬೆಂಗಳೂರು
Published 13 ಆಗಸ್ಟ್ 2015, 19:48 IST
Last Updated 13 ಆಗಸ್ಟ್ 2015, 19:48 IST

ಬೆಂಗಳೂರು ವಿದ್ಯುತ್‌ ಸರಬರಾಜು ಸಂಸ್ಥೆಯು ಎರಡು ತಿಂಗಳ ಹಿಂದೆ ಗ್ರಾಹಕರ ವಿದ್ಯುತ್‌ ರಸೀದಿಯ ಕೆಳಭಾಗದಲ್ಲಿ ಹೆಚ್ಚುವರಿ ಮೊತ್ತವನ್ನು ಸಣ್ಣ ಅಕ್ಷರಗಳಲ್ಲಿ ಮುದ್ರಿಸಿತ್ತು. ಅದನ್ನು ಗಮನಿಸದ ಎಷ್ಟೋ ಗ್ರಾಹಕರು ಈಗ ವಿದ್ಯುತ್‌ ಕಡಿತ ಅನುಭವಿಸುವಂತಾಗಿದೆ.

ಈ ಬಗ್ಗೆ ಇಲಾಖೆಯಲ್ಲಿ ವಿಚಾರಿಸಿದಾಗ, ಇದು ಹೆಚ್ಚುವರಿ ಠೇವಣಿ ಮೊತ್ತ ಎಂದು ತಿಳಿಸುತ್ತಾರೆ. ಗ್ರಾಹಕರು ಹೆಚ್ಚುವರಿ ವಿದ್ಯುತ್ ಬಳಸಿದ್ದಕ್ಕಾಗಿ ಹೆಚ್ಚುವರಿ ಠೇವಣಿಯನ್ನು ನೀಡಬೇಕು ಎಂಬ ಸಮಜಾಯಿಷಿ ನೀಡುತ್ತಾರೆ. ಆದರೆ ಈ ಮೊದಲೇ ಇಲಾಖೆಯಲ್ಲಿ ಇರಿಸಿರುವ ಠೇವಣಿ ಮೊತ್ತದಲ್ಲಿ ಕಡಿತಗೊಳಿಸಿ, ಹೀಗೆ ಕಡಿತಗೊಂಡ ಮೊತ್ತವನ್ನು ನಾವು ಈಗ ಹೆಚ್ಚುವರಿ ಠೇವಣಿ ಮೊತ್ತವಾಗಿ ಪಾವತಿಸಬೇಕಾಗಿದೆ.

ನಾವೇನು ಪ್ರಜಾಪ್ರಭುತ್ವದ ಸರ್ಕಾರದಲ್ಲಿ ಇದ್ದೇವೆಯೋ ಅಥವಾ ಏಕ ಚಕ್ರಾಧಿಪತ್ಯದ ಆಡಳಿತದಲ್ಲಿದ್ದೇವೋ ತಿಳಿಯುತ್ತಿಲ್ಲ. ನಮ್ಮ ಠೇವಣಿ ಮೊತ್ತವನ್ನು ನಮಗೇ ಅರಿವಿಲ್ಲದಂತೆ ಕಡಿತಗೊಳಿಸಿ ಮತ್ತೆ ಠೇವಣಿಯನ್ನು ತುಂಬಿ ಎನ್ನುವ ಇಲಾಖೆಯ ಕ್ರಮ ಎಷ್ಟು ಸಮಂಜಸ?

ವಿದ್ಯುತ್ ಬಳಕೆಗೆ ಈಗಾಗಲೇ ದುಬಾರಿ ಮೊತ್ತ ನೀಡುತ್ತಿದ್ದೇವೆ. ಪ್ರತಿ ಹಂತಕ್ಕೂ ಯೂನಿಟ್ ದರ ದ್ವಿಗುಣಗೊಳ್ಳುತ್ತದೆ. ಇದರ ಜೊತೆಗೆ ಅಧಿಕ ಬಳಕೆ ಎಂಬ ನೆಪವೊಡ್ಡಿ ಹಣ ಸುಲಿಗೆ ಮಾಡುತ್ತಿರುವುದರ ವಿರುದ್ಧ ಇಂಧನ ಸಚಿವರು ಕ್ರಮ ಕೈಗೊಳ್ಳುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.