‘ತೇಜಸ್ವಿ ನೆನಪುಗಳಿಗೆ ಜಾರಿದ ಕಡಿದಾಳ್ ಶಾಮಣ್ಣ’ ಎಂಬ ವರದಿಗೆ ಬಂದಿರುವ ಸುರೇಂದ್ರಶೆಟ್ಟಿ ಅವರ ಪ್ರತಿಕ್ರಿಯೆಗೆ (ಪ್ರ.ವಾ. ಏ.7) ಈ ಸ್ಪಷ್ಟೀಕರಣ. ಶೆಟ್ಟಿ ಅವರ ಅಭಿಪ್ರಾಯದಂತೆ ಕಪ್ಪು ಬಾವುಟ ಪ್ರದರ್ಶನ ಕಡಿದಾಳು ಮಂಜಪ್ಪನವರ ಮಗಳ ಮದುವೆ ಸಂದರ್ಭದಲ್ಲಿ ನಡೆದಿಲ್ಲ. ಆದರೆ ಕಪ್ಪು ಬಾವುಟ ಪ್ರದರ್ಶನ ನಡೆದಿದ್ದು ನಿಜ.
ಅದು ಅವರ ತಮ್ಮಂದಿರ ಮಕ್ಕಳಾದ ಶಾಂತ ಮತ್ತು ವೇದಾ ಎಂಬುವವರ ಮದುವೆಯ ನಿಶ್ಚಿತಾರ್ಥದ ಸಂದರ್ಭದಲ್ಲಿ! ಶಾಮಣ್ಣನವರಲ್ಲಿ, ಸರಳ ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿ ತಮ್ಮ ದೊಡ್ಡಪ್ಪನವರಲ್ಲಿ ಈ ವಿಷಯವನ್ನು ಮಾತನಾಡುವಂತೆ ಕೇಳಿಕೊಂಡಿದ್ದವರು ಸ್ವತಃ ಮದುಮಕ್ಕಳಾಗಿದ್ದ ಶಾಂತ ಮತ್ತು ವೇದಾ!
‘ನಿಶ್ಚಿತಾರ್ಥಕ್ಕೆ ಪುರೋಹಿತರನ್ನು ಕರೆಸದೆ, ತಾವೇ ಒಂದು ದಿನಾಂಕವನ್ನು ನಿಗದಿಪಡಿಸಿ ಸರಳವಾಗಿ ಮದುವೆ ನೆರವೇರಿಸಬೇಕು’ ಎಂಬುದಷ್ಟೆ ಶಾಮಣ್ಣನವರ ಕೋರಿಕೆಯಾಗಿತ್ತು. ಶಾಮಣ್ಣನವರ ಕೋರಿಕೆಯನ್ನು ಮಂಜಪ್ಪನವರು ಸಕಾರಣವಾಗಿ ತಿರಸ್ಕರಿಸಿದ ಮೇಲೆ, ತೇಜಸ್ವಿ, ರಾಮದಾಸ್, ಎನ್.ಡಿ.ಸುಂದರೇಶ್, ಪ್ರಭಾಕರ, ರಮೇಶ, ಗಾಂಗೇಯ ಮೊದಲಾದವರು ಸೇರಿ ಮಂಜಪ್ಪನವರೆದುರಿಗೆ ಮನವಿ ಪತ್ರವನ್ನು ಓದಿ, ಕಪ್ಪುಬಾವುಟವನ್ನು ನೆಟ್ಟು ನಿರ್ಗಮಿಸುತ್ತಾರೆ. ಈ ವಿಚಾರ ಶಾಮಣ್ಣನವರ ‘ಕಾಡತೊರೆಯ ಜಾಡು’ (ಪುಟ 31–-41) ಎಂಬ ಪುಸ್ತಕದಲ್ಲಿ ವಿವರವಾಗಿ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.