ಎನ್ಡಿಎ ಸರ್ಕಾರವು ₹ 500 ಮತ್ತು ₹ 1,000 ಮೌಲ್ಯದ ನೋಟುಗಳನ್ನು ರದ್ದುಪಡಿಸಿ ₹ 2,000 ಮೌಲ್ಯದ ಹೊಸ ನೋಟುಗಳನ್ನು ಚಲಾವಣೆಗೆ ತಂದಿದೆ. ನಗದುರಹಿತ ವ್ಯಾಪಾರಕ್ಕೆ ಉತ್ತೇಜನ ನೀಡಲಾಗುತ್ತಿದೆ.
ನೋಟು ರದ್ದತಿ, ನಗದುರಹಿತ ವಹಿವಾಟಿನ ವಿಚಾರವಾಗಿ ವಿರೋಧ ಪಕ್ಷಗಳು ಬಹುದೊಡ್ಡ ಪ್ರತಿಭಟನೆ ನಡೆಸುತ್ತಿವೆ. ಆದರೆ ಈ ಪ್ರಕ್ರಿಯೆ ಇಂದಿನದಲ್ಲ. ದೇಶದ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರು ಈ ಪ್ರಕ್ರಿಯೆಗೆ ಕಾರಣರೆಂಬುದನ್ನು ಮನಗಾಣಬೇಕು.
ಇವರು ಭಾರತವನ್ನು ಆರ್ಥಿಕ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿ, ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿಸಲು ಕೆಲಸ ಮಾಡಿದರು. ಈ ಮೂವರ ಪ್ರಯತ್ನದ ಫಲವಾಗಿ ದೇಶದಲ್ಲಿ ನಗದುರಹಿತ ವಹಿವಾಟು ನಡೆಸಲು ಬೇಕಿರುವ ಮೂಲಸೌಕರ್ಯ ನಿರ್ಮಾಣವಾಯಿತು. ಆ ಮೂಲಸೌಕರ್ಯದ ಫಲವನ್ನು ಇಂದಿನ ಸರ್ಕಾರ ಬಳಸಿಕೊಳ್ಳುತ್ತಿದೆ.
ಆದ್ದರಿಂದ ನಗದುರಹಿತ ವಹಿವಾಟಿನ ಕೀರ್ತಿಯು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕು. ಇದನ್ನು ಅರ್ಥಮಾಡಿಕೊಳ್ಳದೆ ಟೀಕಿಸುವುದು ತಪ್ಪು. ವಿಚಿತ್ರವೆಂದರೆ ಕಾಂಗ್ರೆಸ್ ಪಕ್ಷಕ್ಕೇ ಇದು ಅರ್ಥವಾಗಿಲ್ಲ.
-ರುದ್ರೇಶ್ ಬಿ. ಅದರಂಗಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.