ADVERTISEMENT

ಜಿಗುಟುತನ ಬೇಡ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 19:30 IST
Last Updated 26 ಜುಲೈ 2016, 19:30 IST

ವೇತನ ಪರಿಷ್ಕರಣೆ ಬೇಡಿಕೆ ಮಂಡಿಸಿರುವ ಸಾರಿಗೆ ನಿಗಮಗಳ ನೌಕರರ ಮುಷ್ಕರ ಉಗ್ರರೂಪ ತಳೆದು ಅಲ್ಲಲ್ಲಿ ಕಲ್ಲು ತೂರಾಟ ನಡೆದಿರುವುದಲ್ಲದೆ ಪ್ರಯಾಣಿಕರಿಗೆ ಭಾರಿ ಅನನುಕೂಲವಾಗಿದೆ. ಇಂತಹ ಸ್ಥಿತಿಗೆ ಬರೀ ನೌಕರರನ್ನು ನಿಂದಿಸಲು ಸಾಧ್ಯವಿಲ್ಲ. ಸರ್ಕಾರದ ಪಾತ್ರವೂ ಪ್ರಮುಖವಾಗಿದೆ. ನೌಕರರು ವೇತನವನ್ನು ಶೇಕಡ 30ರಿಂದ 35ರಷ್ಟು ಹೆಚ್ಚಿಸಲು ಬೇಡಿಕೆ ಇಟ್ಟಿದ್ದರೆ, ಸರ್ಕಾರ ಶೇಕಡ 10ರಷ್ಟು ಕೊಡುವುದಕ್ಕೆ ಮಾತ್ರ ಸಿದ್ಧವಿರುವುದಾಗಿ ತಿಳಿಸಿದೆ. 

ಶಾಸಕರು ಮತ್ತು ಸಂಸದರ ಸಂಬಳ, ಸಾರಿಗೆಯಲ್ಲಿ ಹೆಚ್ಚಳ ಶೇಕಡ 100ರಿಂದ 125ರವರೆಗೆ ಯಾವುದೇ ಚರ್ಚೆ ಅಥವಾ ವಿಳಂಬವಿಲ್ಲದೆ ತೀರ್ಮಾನವಾಗುತ್ತದೆ. ಆದರೆ ಸರ್ಕಾರಿ ನೌಕರರು ಮತ್ತು ಸರ್ಕಾರದ ಅಂಗ ಸಂಸ್ಥೆಗಳ ನೌಕರರ ವೇತನ ಹೆಚ್ಚಳಕ್ಕೆ ಮಾತುಕತೆ ನಡೆಯುವಾಗ ಸರ್ಕಾರ ಜಿಗುಟುವಾದಕ್ಕೆ ಶರಣಾಗುತ್ತದೆ. ತನಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತದೆ. 

ಈ ನೌಕರರ ಸಂಖ್ಯೆಯು ಶಾಸಕ ಮತ್ತು ಸಂಸದರ ಸಂಖ್ಯೆಗಿಂತ  ಹೆಚ್ಚು  ಎಂಬುದೇನೋ ಸರಿ. ನೌಕರರು ಕೇಳಿದಷ್ಟು ಪ್ರಮಾಣದಲ್ಲಿ ವೇತನ ಪರಿಷ್ಕರಣೆ ಅಸಾಧ್ಯ. ಆದರೆ ಸರ್ಕಾರದ ಜಿಗುಟುತನವೂ ಒಪ್ಪುವಂತಹುದಲ್ಲ.  ಸರ್ಕಾರ ತನ್ನ ಒಣ ಪ್ರತಿಷ್ಠೆಯನ್ನು ಬದಿಗಿಡಬೇಕು. ಸಾರಿಗೆ ನಿಗಮಗಳಿಗೆ ಹೆಚ್ಚು ಆರ್ಥಿಕ ಹೊರೆ ಬೀಳದಂತೆ ಮತ್ತು ನೌಕರರಿಗೂ ಅನ್ಯಾಯವಾಗದಂತೆ ಅವರ ಬೇಡಿಕೆಯನ್ನು ಈಡೇರಿಸಿ ಪ್ರಯಾಣಿಕರ ಸಂಕಷ್ಟ ತಪ್ಪಿಸಬೇಕು.
-ಕೆ.ವಿ.ಸೀತಾರಾಮಯ್ಯ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.