ADVERTISEMENT

ದೇವರನ್ನಾಗಿಸುವುದರಿಂದ...

ಸಿ.ಪಿ.ನಾಗರಾಜ
Published 26 ಮೇ 2017, 19:30 IST
Last Updated 26 ಮೇ 2017, 19:30 IST

‘ಸಾಮಾಜಿಕ ಒಳಿತಿಗಾಗಿ ಕೆಲಸ ಮಾಡಿದವರನ್ನು ದೇವರು ಮಾಡುವ ಕಾಯಿಲೆ ನಮ್ಮಲ್ಲಿದೆ. ಮಂಟೇಸ್ವಾಮಿ, ಕನಕ, ಬಸವಣ್ಣ ಇದಕ್ಕೆ ಉದಾಹರಣೆ’ ಎಂಬ ಆರ್.ವಿ. ಚಂದ್ರಶೇಖರ್ ಅವರ ಮಾತು (ಪ್ರ.ವಾ., ಮೇ 24) ನೂರಕ್ಕೆ ನೂರರಷ್ಟು ಸತ್ಯ.

ನಮ್ಮ ನಿಮ್ಮಂತೆ ಮನುಷ್ಯರಾಗಿ ಹುಟ್ಟಿ ಬೆಳೆದು ಒಳ್ಳೆಯ ನಡೆನುಡಿಗಳ ಮೂಲಕ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಿದ ವ್ಯಕ್ತಿಗಳನ್ನು, ಅವರ ಕಾಲಾನಂತರ ದೇವರನ್ನಾಗಿ ಮಾಡಿ, ಪೂಜಿಸುವ ಕೆಲಸಕ್ಕೆ ತೊಡಗುತ್ತೇವೆ. ಏಕೆಂದರೆ ಅವರ ನಡೆನುಡಿಗಳಲ್ಲಿ ನಮ್ಮ ವ್ಯಕ್ತಿತ್ವದ ಮಿತಿಗೆ ತಕ್ಕಂತೆ ಒಂದೆರಡನ್ನಾದರೂ ಆಚರಣೆಗೆ ತಂದುಕೊಳ್ಳುವುದು ಬಲುದೊಡ್ಡ ಸವಾಲಿನ ಕೆಲಸ.

ಯಾವುದೇ ವ್ಯಕ್ತಿಯನ್ನು ದೇವರನ್ನಾಗಿ ಮಾಡುವುದು ಎಂದರೆ ನಮ್ಮಿಂದ ದೂರ ತಳ್ಳುವುದು ಎಂದೇ ಅರ್ಥ. ಅವರ ಚಿತ್ರಪಟವನ್ನು ಗೋಡೆಯ ಮೇಲೆ ನೇತುಹಾಕಿ ಇಲ್ಲವೇ ವಿಗ್ರಹವನ್ನು ಗದ್ದುಗೆಯ ಮೇಲೆ ಕುಳ್ಳಿರಿಸಿ ನಾನಾ ಬಗೆಯ ಆಚರಣೆಗಳಿಂದ ಮೆರೆಸುವುದರಲ್ಲಿ ಸಂಭ್ರಮಿಸುತ್ತೇವೆ. ಆದುದರಿಂದಲೇ ಇಂದು ನೂರೆಂಟು ಬಗೆಯ ಜಯಂತಿಗಳು ಎಲ್ಲೆಡೆಯಲ್ಲಿಯೂ ವಿಜೃಂಭಣೆಯಿಂದ ನಡೆಯುತ್ತಿವೆ. ಇತಿಹಾಸದ ಕಾಲಘಟ್ಟದಲ್ಲಿ ಮಾನವ ಸಮುದಾಯಕ್ಕೆ ಒಳಿತನ್ನು ಮಾಡಿದ ವ್ಯಕ್ತಿಗಳ ನಡೆನುಡಿಗಳ ಅನುಸರಣೆಗಿಂತ, ಜಾತಿಧರ್ಮಗಳ ನೆಲೆಯಲ್ಲಿ ಅವರನ್ನು ದೇವರನ್ನಾಗಿಸಿ ಪೂಜಿಸುವ ಕಾಯಿಲೆಯು ಒಂದು ಅಂಟುರೋಗವಾಗಿ ಹಬ್ಬುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.