ಸದನ ಒಪ್ಪಿದರೆ, ಸಾರಾಯಿ ಮಾರಾಟ ಪುನರ್ ಆರಂಭಕ್ಕೆ ಕ್ರಮ ಕೈಗೊಳ್ಳಲು ಸಿದ್ಧ ಎಂದು ರಾಜ್ಯದ ಮುಖ್ಯಮಂತ್ರಿಯವರು ಹೇಳಿದ್ದಾರೆ (ಪ್ರ.ವಾ., ಮಾ. 28). ಬಡವರು ಮದ್ಯಪಾನಕ್ಕಾಗಿ ಹೆಚ್ಚು ಖರ್ಚು ಮಾಡ ಬೇಕಾಗುತ್ತದೆ ಮತ್ತು ಸಾರಾಯಿ ನಿಷೇಧದಿಂದ ಕುಡಿತದ ಪ್ರಮಾಣ ಕಡಿಮೆಯಾಗಿಲ್ಲ ಎಂಬುದು ಅವರ ಸಮರ್ಥನೆ. ಮದ್ಯಪಾನಕ್ಕಾಗಿ ಬಡವರು ಹೆಚ್ಚು ಖರ್ಚು ಮಾಡಬೇಕಾಗಿದೆ ಎಂಬುದು ನಿಜ. ಆದರೆ ಸಾರಾಯಿ ನಿಷೇಧದಿಂದ ಕುಡಿತದ ಪ್ರಮಾಣ ಕಡಿಮೆಯಾಗಿಲ್ಲ ಎನ್ನುವುದು ಸರಿಯಲ್ಲ. ಅದೂ ಬಡವರು, ಸಾರಾಯಿ ಇದ್ದಾಗಿನ ರೀತಿಯಲ್ಲಿಯೇ ಕುಡಿತ ಮುಂದುವರಿಸಿದ್ದಾರೆ ಎಂಬ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ.
ಮೊದಲು ಹಳ್ಳಿಯ ಸಂದುಗೊಂದುಗಳಲ್ಲಿ ಮತ್ತು ನಗರಗಳ ಗಲ್ಲಿಗಲ್ಲಿಗಳಲ್ಲಿ ಕೈಗೆಟಕುತ್ತಿದ್ದ ಸಾರಾಯಿ ಅಂಗಡಿಗಳಿಂದ ಬಡವರು ಕುಡಿತಕ್ಕೆ ಸುಲಭದಲ್ಲಿ ಬಲಿಯಾಗುತ್ತಿದ್ದರು. ಈಗ ಆ ಪರಿಸ್ಥಿತಿಯಿಲ್ಲ. ಜೊತೆಗೆ ಆ ಹರಕಲು ಸಾರಾಯಿ ಅಂಗಡಿಗಳ ಅಸಹ್ಯ ದರ್ಶನವೂ ಈಗ ಇಲ್ಲ. ಆದುದರಿಂದ ಸಾರಾಯಿ ಮಾರಾಟದ ವಿಚಾರವನ್ನು ಮತ್ತೆ ಯಾವುದೇ ಕಾರಣದಿಂದ ಚಿಂತಿಸುವ ಆಲೋಚನೆ ಬೇಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.