ADVERTISEMENT

ನಷ್ಟಭರ್ತಿ: ಎಷ್ಟು ಸರಿ?

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

ದೇಶದ ಅಭಿವೃದ್ಧಿಗೆ ಜನಸಾಮಾನ್ಯರು ಪ್ರಾಮಾಣಿಕವಾಗಿ ತೆರಿಗೆಯನ್ನು ತುಂಬಿ ಸಹಕರಿಸಬೇಕು ಎಂದು ಸರ್ಕಾರ ಕೋರುತ್ತದೆ.  ಆದರೆ ಸಾರ್ವಜನಿಕರು ನೀಡಿದ ತೆರಿಗೆಯನ್ನು ನ್ಯಾಯಯುತವಾಗಿ ಬಳಸದೆ, ವಂಚಕರಿಗೆ ಪರೋಕ್ಷವಾಗಿ ಸಹಕರಿಸುತ್ತಿದೆ.

ದೇಶದ ಹಲವಾರು ಉದ್ದಿಮೆದಾರರು ಕೋಟ್ಯಂತರ ರೂಪಾಯಿ ಸಾಲ ಪಡೆದು, ಮರುಪಾವತಿಸದೇ ಹತ್ತಾರು ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‌ಗಳು ನಷ್ಟಕ್ಕೀಡಾಗುವಂತೆ ಮಾಡಿದ್ದಾರೆ.  ಈ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ 22 ಸಾವಿರ ಕೋಟಿ ರೂಪಾಯಿಗಳನ್ನು  ಆರ್ಥಿಕ ನೆರವಿನ ರೂಪದಲ್ಲಿ ಬ್ಯಾಂಕ್‌ಗಳಿಗೆ ನೀಡುತ್ತಿದೆಯೆಂದು ವರದಿಯಾಗಿದೆ. ಇದು ಸರಿಯಲ್ಲ.

ರಾಜಕಾರಣಿಗಳು ಮೂಗು ತೂರಿಸದೇ, ಸ್ವಾತಂತ್ರ್ಯ ನೀಡಿದರೆ ಬ್ಯಾಂಕ್ ಸಿಬ್ಬಂದಿ ಸಾಲ ವಸೂಲು ಮಾಡಲು ಸಶಕ್ತರಾಗಿದ್ದಾರೆ.  ಗಣ್ಯರೆನಿಸಿಕೊಂಡವರು ಉದ್ದಿಮೆ ನೆಪದಲ್ಲಿ ಸಾಲ ಪಡೆದು ಅದನ್ನು ಅನ್ಯ ಚಟುವಟಿಕೆಗಳಿಗೆ ಬಳಸಿ, ಸಾಲ ಮರುಪಾವತಿಸದಿದ್ದರೆ ಜನಸಾಮಾನ್ಯರ ತೆರಿಗೆ ಹಣವನ್ನು ಬ್ಯಾಂಕ್ ನಷ್ಟಭರ್ತಿಗೆ ಬಳಸುವುದು ಎಷ್ಟು ಸಮರ್ಥನೀಯ?

ಸಾರ್ವಜನಿಕರ ಹಣ ಶೋಕಿಗೆ ಅಲ್ಲವೆಂಬ ಸಂದೇಶವನ್ನು ಉದ್ದೇಶಪೂರ್ವಕವಾಗಿ ವಂಚಿಸುವ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ರವಾನಿಸಲಿ. ಕೆಲವೇ ಸಿರಿವಂತರಿಗಾಗಿ ಕೋಟ್ಯಂತರ ಭಾರತೀಯರ ಹಣ ದುರ್ವಿನಿಯೋಗವಾಗುವುದನ್ನು ನಿವಾರಿಸಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.