ADVERTISEMENT

ನಿರ್ಲಜ್ಜ ನಡೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST

ರಾಜ್ಯ ಸಚಿವ ಸಂಪುಟ ಪುನರ್‌ ರಚನೆಯಿಂದಾಗಿ ಕೆಲವರು ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಪೈಕಿ ನಟ ಅಂಬರೀಷ್‌, ವಿ. ಶ್ರೀನಿವಾಸ ಪ್ರಸಾದ್‌, ಖಮರುಲ್‌ ಇಸ್ಲಾಂ ಅವರು ಸಚಿವ ಸ್ಥಾನ  ಕಳೆದುಕೊಂಡು ಚಡಪಡಿಸುತ್ತಿರುವುದನ್ನು  ಮತ್ತು ಬಡಬಡಿಸುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇವರು ಸರ್ವಸ್ವವನ್ನೂ ಕಳೆದುಕೊಂಡವರಂತೆ ವರ್ತಿಸುತ್ತಿರುವುದನ್ನು ನೋಡಿದರೆ, ಕನಿಷ್ಠ ಸಾಮಾನ್ಯ ಜ್ಞಾನವಿಲ್ಲದ ಅಧಿಕಾರಕ್ಕೋಸ್ಕರ ಬದುಕಿರುವ, ತೋರಿಕೆಗೋಸ್ಕರ ಜನಪ್ರತಿನಿಧಿಗಳ ಮುಖವಾಡ ಧರಿಸಿರುವ ನಿರ್ಲಜ್ಜ ವ್ಯಕ್ತಿಗಳಂತೆ ಗೋಚರಿಸುತ್ತಾರೆ.

ಮೂರು ವರ್ಷಗಳ ಅವಧಿಯಲ್ಲಿ ತಮಗೆ ಸಿಕ್ಕ ಅಮೂಲ್ಯವಾದ ಅವಕಾಶವನ್ನು ಇವರು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ತಮಗೆ ವಹಿಸಿದ ಖಾತೆಗಳನ್ನು ಹೇಗೆ ನಿಭಾಯಿಸಿದ್ದಾರೆ ಎಂಬುದೂ ತಿಳಿದಿದೆ.

ಕರ್ನಾಟಕದಲ್ಲಿ 26,826 ಹಳ್ಳಿಗಳಿವೆ. ಹೊಣೆ ಅರಿತು, ಈ ಹಳ್ಳಿಗಳ ಅಭಿವೃದ್ಧಿ ಬಗ್ಗೆ ಕಿಂಚಿತ್ತಾದರೂ ಗಮನಹರಿಸಿ ತಮ್ಮ ಸಚಿವಗಿರಿಯ ಕೆಲಸವನ್ನು ನಿರ್ವಹಿಸಿದ್ದೇವೆಯೇ ಎಂಬ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಳ್ಳಲಿ. ಅಧಿಕಾರ ವ್ಯಾಮೋಹದಿಂದ ಹೊರಬಂದು ಇನ್ನು ಮುಂದಾದರೂ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಜನರ ಪ್ರೀತಿ ವಿಶ್ವಾಸವನ್ನು ಸಂಪಾದಿಸಿ ತಾವು ಕ್ರಿಯಾಶೀಲ ರಾಜಕಾರಣಿಗಳೆಂದು ಸಾಬೀತುಪಡಿಸಲಿ. ಆಗ, ಅಧಿಕಾರ ಅವರ ಮನೆ ಬಾಗಿಲಿಗೇ ಹುಡುಕಿಕೊಂಡು ಬರುತ್ತದೆ.

  ಎಸ್‌. ರಾಮಪ್ಪ, ಹಾರ್‍ನಹಳ್ಳಿ, ಶಿವಮೊಗ್ಗ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.