ADVERTISEMENT

ಪ್ರಭಾವಶಾಲಿ ಪ್ರಕಾಶಕರು!

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 19:42 IST
Last Updated 28 ಡಿಸೆಂಬರ್ 2017, 19:42 IST

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಪುಸ್ತಕ ಖರೀದಿಯಲ್ಲೂ ಅಕ್ರಮ?’ (ಪ್ರ.ವಾ., ಡಿ.28) ವರದಿ ಕನ್ನಡದ ಆಯ್ದ, ಅದರಲ್ಲೂ ಬೆಂಗಳೂರು ಕೇಂದ್ರಿತ ಪ್ರಭಾವಶಾಲಿ ಪ್ರಕಾಶಕರು ಮಾತ್ರವೇ ಹೇಗೆ ಸರ್ಕಾರದ ಸೌಲಭ್ಯಗಳ ಲಾಭ ಪಡೆಯುತ್ತಾರೆ ಎನ್ನುವುದನ್ನು ಬಿಡಿಸಿಟ್ಟಿದೆ.

ಕನ್ನಡದ ಕೆಲವೇ ಕೆಲವು ಪ್ರಕಾಶಕರು ಆರ್ಥಿಕವಾಗಿ ಹೇಗೆ ಪ್ರಬಲರಾಗಿ ಬೆಳೆದು, ಉಳಿದ ಹೊಸ ಪ್ರಕಾಶಕರು ಒಂದೆರಡು ವರ್ಷದಲ್ಲೇ ನಷ್ಟವನ್ನನುಭವಿಸಿ, ಕನ್ನಡ ಪುಸ್ತಕ ಪ್ರಕಟಣೆಯ ಸಹವಾಸವನ್ನೇ ಕೈಬಿಡುತ್ತಾರೆ ಎನ್ನುವುದಕ್ಕೂ ಈ ವರದಿ ಬಹುದೊಡ್ಡ ಸಾಕ್ಷಿಯಾಗಿದೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಾತ್ರ ಇಂತಹ ಅಕ್ರಮ ನಡೆದಿದೆ ಎಂದುಕೊಳ್ಳಬೇಕಿಲ್ಲ. ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪುಸ್ತಕ ಖರೀದಿಯಲ್ಲೂ ಇಲಾಖೆಯ ಆಯಕಟ್ಟಿನ ಜಾಗದಲ್ಲಿ ಕುಳಿತ ಅಧಿಕಾರಿಗಳಿಗೆ ಮತ್ತು ಪುಸ್ತಕ ಆಯ್ಕೆ ಸಮಿತಿ(?)ಗೆ ಬೇಕಾದ ಪ್ರಕಾಶಕರ ಪುಸ್ತಕಗಳು ದಂಡಿ ದಂಡಿಯಾಗಿ ಆಯ್ಕೆಯಾಗಿದ್ದರೆ, ಉಳಿದ ಪ್ರಕಾಶಕರ ಶೇಕಡಾ ಹತ್ತರಷ್ಟು ಪುಸ್ತಕಗಳನ್ನು ಆಯ್ಕೆ ಮಾಡಿದ ಉದಾಹರಣೆಗಳು ಬೇಕಾದಷ್ಟಿವೆ. ‘ಸರ್ವಶಿಕ್ಷಣ ಅಭಿಯಾನ’ದಡಿಯಂತೂ ಕೆಲವು ಪ್ರಕಾಶಕರು ಶಿಕ್ಷಣ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ಬಳಸಿಕೊಂಡು ಬೇಕಾಬಿಟ್ಟಿ ಪುಸ್ತಕಗಳನ್ನು ಮಾರಾಟ ಮಾಡಿದ್ದರು. ಇನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ಪುಸ್ತಕ ಆಯ್ಕೆಯಲ್ಲೂ ಕೆಲವೇ ಕೆಲವು ಪ್ರಕಾಶಕರ ರಾಶಿ ರಾಶಿ ಪುಸ್ತಕಗಳು ಹಿಂಬಾಗಿಲಿನಿಂದ ಆಯ್ಕೆಯಾಗುತ್ತವೆ. ಇದರ ಮುಂದುವರಿದ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದ ಪುಸ್ತಕ ಖರೀದಿ ಅಕ್ರಮ ಹೊರಬಂದಿದೆ.

ADVERTISEMENT

ಇಂತಹ ಪುಸ್ತಕ ಖರೀದಿ ಬಗ್ಗೆ ಇಲಾಖೆಯವರು ಪತ್ರಿಕೆಗಳಲ್ಲಿ ಪ್ರಕಟಣೆ ನೀಡದೇ ಇರುವುದು ಮತ್ತು ರಾಜ್ಯದ ಎಲ್ಲಾ ಪ್ರಕಾಶಕರ ಗಮನಕ್ಕೆ ತಾರದೇ ತೆರೆಮರೆಯಲ್ಲಿ ವ್ಯವಹಾರ ನಡೆಸಿರುವುದು ನೋಡಿದರೆ ದೊಡ್ಡ ಮಟ್ಟದ ಭ್ರಷ್ಟಾಚಾರ ಆಗಿರುವುದಂತೂ ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಮತ್ತು ಇಂತಹ ಅವ್ಯವಹಾರಕ್ಕೆ ಮುಂದಾದ ಪುಸ್ತಕ ಪ್ರಕಾಶಕರನ್ನು ಸರ್ಕಾರವೇ ಕಪ್ಪು ಪಟ್ಟಿಗೆ ಸೇರಿಸಿದರೆ ಇಂತಹದ್ದೆಲ್ಲ ಕೊನೆಯಾಗಬಹುದು.

ಸರ್ಕಾರದಿಂದ ಸಿಗುವ ಇಂತಹ ಲಾಭಗಳು ಬೆಂಗಳೂರು ಕೇಂದ್ರಿತ ಬಲಿಷ್ಠ ಪ್ರಕಾಶಕರಿಗೆ ಮಾತ್ರ ಸಿಗದೆ, ರಾಜ್ಯದೆಲ್ಲೆಡೆ ಇರುವ ಇತರ ಸಣ್ಣ ಪುಟ್ಟ ಪ್ರಕಾಶಕರಿಗೂ ಸಿಕ್ಕು, ಅವರು ಕೂಡಾ ಮುಂ
ದೊಂದು ದಿನ ದೊಡ್ಡ ಪ್ರಕಾಶಕರಾಗಿ ಬೆಳೆದು, ಕನ್ನಡ ಪುಸ್ತಕೋದ್ಯಮದ ವಿಸ್ತಾರವನ್ನು ಇನ್ನಷ್ಟು ಹೆಚ್ಚಿಸಲಿಕ್ಕೂ ಸಾಧ್ಯವಾಗುವಂತಾಗಬೇಕು.

–ಆರುಡೋ ಗಣೇಶ,  ಹೊಸನಗರ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.