ADVERTISEMENT

ಬಳಸಿಕೊಳ್ಳಿ

ಪ್ರವೀಣ್ ಎಸ್ ಶೆಟ್ಟಿ ಮಂಗಳೂರು
Published 2 ಸೆಪ್ಟೆಂಬರ್ 2015, 19:46 IST
Last Updated 2 ಸೆಪ್ಟೆಂಬರ್ 2015, 19:46 IST

ಮಹಾರಾಷ್ಟ್ರದಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರರ ಬಲಿದಾನದಿಂದ  ಮೂಢನಂಬಿಕೆ ನಿಷೇಧ ಕಾನೂನು ಅನುಷ್ಠಾನಗೊಂಡಿತು. ಅವರು ಜೀವಂತವಿದ್ದಾಗ ಅಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌- ಎನ್‌ಸಿಪಿ ಸರ್ಕಾರ ಮೃದು ಹಿಂದುತ್ವ ನೀತಿ ಅನುಸರಿಸುತ್ತಿದ್ದುದರಿಂದ, ಏನಾದರೊಂದು ನೆಪ ಹೇಳಿ ಮಸೂದೆ ಅಂಗೀಕರಿಸುವುದನ್ನು  ಮುಂದೂಡುತ್ತಲೇ ಬಂದಿತ್ತು.

ಆದರೆ ದಾಭೋಲ್ಕರರ ಹತ್ಯೆ ನಂತರ ಅವರ ಶಿಷ್ಯರು, ಅಭಿಮಾನಿಗಳು ಹಾಗೂ ಸಹವರ್ತಿಗಳು ಹೇರಿದ ಭಾರಿ ಒತ್ತಡದಿಂದ ಸರ್ಕಾರ ಮಸೂದೆ ಅಂಗೀಕರಿಸುವ ಅನಿವಾರ್ಯ ಉಂಟಾಯಿತು. ಹೀಗೆ ದಾಭೋಲ್ಕರರ ಬಲಿದಾನ ಕೊನೆಗೂ ವ್ಯರ್ಥವಾಗಲಿಲ್ಲ.

ಅದೇ ರೀತಿ ಡಾ. ಎಂ.ಎಂ.ಕಲಬುರ್ಗಿಯವರ ಬಲಿದಾನವೂ ವ್ಯರ್ಥವಾಗದಿರಲಿ. ಮೂಢನಂಬಿಕೆ ನಿಷೇಧ ಕಾಯ್ದೆ ಕರ್ನಾಟಕದಲ್ಲೂ ಅನುಷ್ಠಾನವಾಗುವಂತೆ ಕಲಬುರ್ಗಿಯವರ ಅಭಿಮಾನಿಗಳಾಗಿರುವ ಸಮಸ್ತ ಕನ್ನಡಿಗರೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿ.

ರಾಜ್ಯದ ಈಗಿನ ಕಾಂಗ್ರೆಸ್‌ ಸರ್ಕಾರವೂ ಮೃದು ಹಿಂದುತ್ವ ನೀತಿ ಅನುಸರಿಸುತ್ತಿರುವುದರಿಂದ ಈ ಕಾಯ್ದೆಯ ಅನುಷ್ಠಾನಕ್ಕೆ ಅಷ್ಟು ಸುಲಭವಾಗಿ  ಅದು ಒಪ್ಪಲಿಕ್ಕಿಲ್ಲ. ಆದರೆ ಈಗ ಪ್ರೊ. ಕಲಬುರ್ಗಿಯವರ ಹತ್ಯೆಯಿಂದಾಗಿ ಪರಿಸ್ಥಿತಿ ಕಾವೇರಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಕಾಯ್ದೆ ಅನುಷ್ಠಾನಗೊಳಿಸುವ ಸುಸಮಯ ಒದಗಿ ಬಂದಿದೆ. ಈ ಸಂದರ್ಭ ಕೈತಪ್ಪಲು ಬಿಡಬಾರದು. ಇದುವೇ ಕಲಬುರ್ಗಿಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.