ಶೇಖರ್ ಗುಪ್ತಾ ಅವರ ‘ಬುಲೆಟ್ ರೈಲು ಮತ್ತು ಹೋಮಿಯೊಪಥಿ ಚಿಂತನೆ’ ಲೇಖನ (ಪ್ರ.ವಾ., ಸೆ. 17) ಸಕಾಲಿಕ. ಏಕಕಾಲಕ್ಕೆ ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಸೇರಿಸುವ ಕ್ಷಮತೆ ಇರುವ ನಮ್ಮದೇಶಕ್ಕೆ ಬುಲೆಟ್ ರೈಲು ಯಾಕೆ ಬೇಡ?
ಕಡಿಮೆ ಬಡ್ಡಿ ದರದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಸಿಗುತ್ತಿರುವಾಗ ಇಂಥ ಯೋಜನೆ ಕೈಬಿಡಬಹುದೇ? ಲೇಖಕರು ಬಹಳ ವಸ್ತುನಿಷ್ಠವಾಗಿ ಪ್ರಕರಣವನ್ನು ವಿಶ್ಲೇಷಿಸಿದ್ದಾರೆ.
ಮೊಸರಿನಲ್ಲಿ ಕಲ್ಲು ಹುಡುಕುವ ಗಂಡಂದಿರು ಇದ್ದೇ ಇರುತ್ತಾರೆ. ಈಗಿನ ಮೊಬೈಲ್ ಕ್ರಾಂತಿ ನೋಡಿದಾಗ, ಬುಲೆಟ್ ರೈಲು ಸೇರಿಕೊಂಡಂತೆ ಎಲ್ಲಾ ಆಧುನಿಕ ಯೋಜನೆಗಳನ್ನು ತೆರೆದ ಬಾಹುಗಳಿಂದ ಸ್ವಾಗತಿಸಿದರೆ ತಪ್ಪೇನಿಲ್ಲ.
ಈ ಯೋಜನೆ ಸಾವಿರಾರು ಕೈಗಳಿಗೆ ದುಡಿಮೆ ನೀಡುತ್ತದೆ. ರೈಲು ಮಾರ್ಗದ ಇಕ್ಕೆಲಗಳಲ್ಲೂ ಬೆರಗಾಗುವ ಅಭಿವೃದ್ಧಿ ಟಿಸಿಲೊಡೆಯುತ್ತದೆ. ಈಗ ಬೆಂಗಳೂರಿನಲ್ಲಿ ‘ಮೆಟ್ರೊ’ ರೈಲಿನಲ್ಲಿ ನಿಲ್ಲಲೂ ಜಾಗವಿರದಷ್ಟು ಕಿಕ್ಕಿರಿದ ಪ್ರಯಾಣಿಕರನ್ನು ನೋಡಿದಾಗ ಆಧುನಿಕ ಯೋಜನೆಗಳ ಅಗತ್ಯ ಮನವರಿಕೆ ಆಗುತ್ತದೆ.
ಪ್ರತಿಯೊಂದು ಕ್ರಿಯೆಗೂ ವಿರುದ್ಧ ದಿಕ್ಕಿನ ಇನ್ನೊಂದು ಕ್ರಿಯೆ ಇರುತ್ತದೆ ಎಂಬುದು ನ್ಯೂಟನ್ ಸಿದ್ಧಾಂತ. ಯೋಜನೆಯನ್ನು ವಿರೋಧಿಸುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದ್ದಲ್ಲಿ ಅಂಥವುಗಳನ್ನು ಮಾತುಕತೆಯಿಂದ ಪರಿಹರಿಸಿಕೊಂಡು, ವಿರೋಧಕ್ಕಾಗಿ ನಡೆಸುವ ವಿರೋಧವನ್ನು ಕಡೆಗಣಿಸಿ ಮುಂದೆ ಸಾಗುವುದು ಈ ಕ್ಷಣದ ಅಗತ್ಯ.
–ವೆಂಕಟೇಶ ಮುದಗಲ್, ಕಲಬುರ್ಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.