ADVERTISEMENT

ಮಳೆನೀರಿನ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

‘ಮಳೆ ಸುರಿತದ ಹಿಂದಿನ ಸತ್ಯ’ (ಸಂಗತ, ಜುಲೈ 17) ಕುರಿತಾಗಿ ನನ್ನ ಕೆಲವು ಅನಿಸಿಕೆಗಳು. ಲೇಖನದಲ್ಲಿರುವಂತೆ ಜಗತ್ತಿನಲ್ಲಿ 11 ಸಾವಿರದಷ್ಟು ಹವಾಮಾನ ಅವಲೋಕನ ಘಟಕಗಳು ಈ ಭೂಮಿಯ ಗಾತ್ರಕ್ಕೆ ಹೋಲಿಸಿದರೆ ಬಹಳ ಕಡಿಮೆಯೇ.

ನಾನು ದಿನಾಲು 14 ಕಿ.ಮೀ. ದೂರದಲ್ಲಿರುವ ಕಾರ್ಖಾನೆಗೆ ದ್ವಿಚಕ್ರವಾಹನದಲ್ಲಿ ಹೋಗಿ ಬರುತ್ತೇನೆ. ಈ ದೂರ ಕ್ರಮಿಸುವಷ್ಟರಲ್ಲಿ ಕೆಲವು ಕಡೆ ಮಳೆ ಸುರಿದರೆ, ಕೆಲವು ಕಡೆ ತುಂತುರೂ ಸಹ ಇರುವುದಿಲ್ಲ.

ಮೈಸೂರಿನಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ನಾಗನಹಳ್ಳಿ ಹವಾಮಾನ ಕೇಂದ್ರ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡುಗುಗಳಿಗೆ ಸಂಬಂಧಪಟ್ಟಂತೆ ಪ್ರಕಟಿಸುವ ಹವಾಮಾನ ಮುನ್ಸೂಚನೆ ಎಷ್ಟು ನಿಖರವಾಗಿರಲು ಸಾಧ್ಯ? ಸುಮಾರು 30–40 ವರ್ಷಗಳ ಹಿಂದೆ ಜೂನ್‌ನಲ್ಲಿ ಕರಾರುವಾಕ್ಕಾಗಿ ಮಳೆ ಬರುತ್ತಿತ್ತು.

ADVERTISEMENT

ಆಷಾಢದಲ್ಲಿ ಜಡಿ ಮಳೆ. ದಸರಾದಲ್ಲಿ ಮಳೆ. ಇದೆಲ್ಲಾ ಆದಷ್ಟು ನಿಖರವಾಗಿ ಆಗುತ್ತಿತ್ತು. ನಮ್ಮ ಭೂಮಿಯ ಮೇಲೆ ಮಾನವ ಮಾಡುತ್ತಿರುವ ಕ್ರಿಯೆಗಳನ್ನು ಗಮನಿಸಿದರೆ ನಾವು ಎಲ್ಲ ಕಾಲಕ್ಕೂ ಒಂದೇ ರೀತಿಯ ಮಳೆಯನ್ನು ಅಪೇಕ್ಷಿಸುವಂತಿಲ್ಲ.

ರಾಸಾಯನಿಕಗಳನ್ನು ಸುರಿಸಿ ಮೋಡ ಕರಗಿಸಬಹುದಾದರೆ, ಮನುಷ್ಯ  ತಯಾರಿಸುವ ರಾಸಾಯನಿಕಗಳೇ ಮೋಡ ಕರಗದಂತೆ ತಡೆದು ಮಳೆಯನ್ನೂ ತಡೆ ಹಿಡಿಯಬಹುದಲ್ಲವೇ? ಇಂತಹ ಪರಿಸ್ಥಿತಿಯಲ್ಲಿ ನಮಗಿರುವ ದಾರಿಯೊಂದೇ– ಮಳೆ ಯಾವಾಗ ಸುರಿಯುತ್ತದೋ ಆಗ ನೀರನ್ನು ಜತನವಾಗಿ ಶೇಖರಿಸಿ ಮುಂದಿನ ದಿನಗಳಿಗೆ ಇಟ್ಟುಕೊಳ್ಳುವುದು.
-ಎಸ್.ಕೆ. ವರದರಾಜು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.