‘ಪ್ರಿಯ ಗುರುಗಳೇ, ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು?’ ಎಂಬ ಸುದೇಶ ದೊಡ್ಡಪಾಳ್ಯರ (ಪ್ರ.ವಾ., ಆ. 26) ಲೇಖನ ಓದಿ, ಇಂಥವರು ಇನ್ನೂ ಇದ್ದಾರಲ್ಲಾ ಎಂದು ತುಂಬಾ ಸಂತೋಷವೇ ಆಯಿತು. ಕರ್ತವ್ಯನಿಷ್ಠೆ, ಮಕ್ಕಳ ಮೇಲೆ ಪ್ರೀತಿ, ವಾತ್ಸಲ್ಯ, ಪಡೆದ ಸಂಬಳಕ್ಕೆ ಋಣ ತೀರಿಸುವ ನೈತಿಕತೆ ಇದ್ದವನು ಮಾತ್ರ ಶಿಕ್ಷಕ ವೃತ್ತಿಗೆ ಅರ್ಹ.
ಹೀಗಲ್ಲದೆ ಸರ್ಕಾರಿ ಕೆಲಸ ಸಿಕ್ಕ ಕೂಡಲೆ ವರ್ಗಾವಣೆಗೆ, ಕೃಷಿ ಕೆಲಸಕ್ಕೆ, ಚೀಟಿ ಬಡ್ಡಿ ವ್ಯವಹಾರಕ್ಕೆ, ರಾಜಕೀಯ ಕಾಡುಹರಟೆಗೆ, ಇನ್ಕ್ರಿಮೆಂಟ್, ಪ್ರಮೋಷನ್ ಎಂದು ತಾರಾಡುವ ನಾಮಮಾತ್ರ ಶಿಕ್ಷಕರಾಗಿರುವ ಇಂದಿನ ಕಾಲದಲ್ಲಿ ಕಾಶಿಬಾಯಿ, ಗೋಪಾಲರಾವ್, ಸಿಂದಗಿ ಮಾಸ್ಟರ್ ಇಂತಹವರು ಆದರ್ಶ ಶಿಕ್ಷಕರಾಗಿರುವುದು ಶ್ಲಾಘನೀಯ.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆ ಸರ್ಬತ್ ಎಂಬ ಕುಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ತನ್ನ ಜೀವಮಾನವನ್ನೇ ಮುಡಿಪಾಗಿಟ್ಟ ಸಿದ್ದವೀರಣ್ಣಎಂಬುವರನ್ನು ನೆನೆಯಬೇಕು. ಇವರಿಗೆ ಗುಡಿ ಕಟ್ಟಿ ಆ ಊರಿನ ಜನ ಆರಾಧಿಸುತ್ತಿದ್ದಾರೆಂದು ‘ಪ್ರಜಾವಾಣಿ’ಯಲ್ಲಿ ವರದಿಯಾಗಿತ್ತು. ಶಿಕ್ಷಕ ವೃತ್ತಿ ಎಂಬುದು ಎಂದಿಗೂ ಮುಕ್ಕಾಗದ ಮೌಲ್ಯ. ಈ ಪರಿಜ್ಞಾನ ಶಿಕ್ಷಕರಾದವರಿಗೆ ಇರಬೇಕು. ಅಂಥವರಿಗೆ ಸಮಾಜ ಒಂದಲ್ಲ ಒಂದು ದಿನ ಗೌರವ ಕೊಟ್ಟೇ ಕೊಡುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.