ADVERTISEMENT

ವಿಳಂಬ ತಪ್ಪಿಸಿ

ಕೆ.ವಿ.ಸೀತಾರಾಮಯ್ಯ, ಹಾಸನ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST

ತಪ್ಪು ಮಾಡದಿದ್ದರೂ ಸೆರೆಮನೆಯಲ್ಲಿ ಆರೋಪಿಗಳು ಕೊಳೆತಿರುವುದು  ಮಲೇಗಾಂವ್ ಪ್ರಕರಣದಲ್ಲಿ ಮಾತ್ರವಲ್ಲ.  ಮಾಲೇಗಾಂವ್ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಮುಂಬೈನ ವಿಶೇಷ ನ್ಯಾಯಾಲಯ 9 ಅರೋಪಿಗಳನ್ನು ಖುಲಾಸೆಗೊಳಿಸಿದೆ. ಅವರು ಐದು ವರ್ಷಗಳ ಕಾಲ ಸೆರೆವಾಸ ಅನುಭವಿಸಿರುವುದು ಅತಿ ದಾರುಣವಾದ ವಿಷಯ.

ಆದರೆ ಹೀಗೆ ಆಗಿರುವುದು ಇದೊಂದೇ ಪ್ರಕರಣದಲ್ಲಿ ಅಲ್ಲ. ವಿಚಾರಣಾಧೀನರಾಗಿ ಕೆಲವರು ಅನೇಕ ವರ್ಷ ಜೈಲುಗಳಲ್ಲಿ ಕೊಳೆತ ಬಳಿಕ ಖುಲಾಸೆಗೊಂಡ ನಿದರ್ಶನಗಳಿವೆ.  ಅದಕ್ಕೆ ಪರಿಹಾರ ನೀಡುವ ಕುರಿತು ಈ ತನಕ ಯಾರೂ ಗಂಭೀರವಾಗಿ ಚಿಂತಿಸಿಲ್ಲ ಎಂಬುದು ವಿಷಾದದ ಸಂಗತಿ.

ಕ್ರಿಮಿನಲ್ ಪ್ರಕರಣಗಳನ್ನು ಕನಿಷ್ಠ ಒಂದು ಅಥವಾ ಎರಡು ವರ್ಷಗಳಲ್ಲಿ ಇತ್ಯರ್ಥಗೊಳಿಸಿದಲ್ಲಿ, ಖುಲಾಸೆಗೊಂಡವರು ಸೆರೆಮನೆಯಲ್ಲಿದ್ದರೂ ಅವರು ಬಹಳ ಕಾಲ ಇದ್ದಂತಾಗುವುದಿಲ್ಲ. ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಕೀಲರ ಸಹಕಾರಬೇಕು. ಪ್ರಕರಣಗಳ ಸಂಖ್ಯೆಗೆ ತಕ್ಕಂತೆ ನ್ಯಾಯಾಧೀಶರ ಹುದ್ದೆ ಸೃಷ್ಟಿಯಾಗಬೇಕು. ಖಾಲಿ ಹುದ್ದೆಗಳು ಕಾಲಕಾಲಕ್ಕೆ ಭರ್ತಿಯಾಗಬೇಕು. ನ್ಯಾಯಾಲಯಗಳಿಗೆ ಬೇಸಿಗೆ, ದಸರಾ ಹೆಸರಿನಲ್ಲಿ ಇರುವ ರಜೆ ಅವಧಿ ಕಡಿತವಾಗಬೇಕು.

ತೀರ್ಪು ತ್ವರಿತವಾಗಿ ಹೊರಬಿದ್ದರಷ್ಟೆ  ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರೆತಂತಾಗುತ್ತದೆ. ಸಿವಿಲ್ ಪ್ರಕರಣಗಳಲ್ಲಿ ಅನ್ಯಾಯದ ಹಾದಿ ಹಿಡಿದವರು ನ್ಯಾಯಾಲಯದಲ್ಲಿ ವಿಚಾರಣೆ ವಿಳಂಬವಾಗುವುದನ್ನೇ ಬಯಸುತ್ತಾರೆ. ಅಂಥ ಪ್ರಕರಣದಲ್ಲಿ ತೀರ್ಪು ವಿರುದ್ಧವಾಗಿ ಬಂದರೂ ಆ ತನಕ ಅವರು ಸ್ವತ್ತು ಅನುಭವಿಸಿದ ತೃಪ್ತಿ ಪಡೆಯುತ್ತಾರೆ. ನ್ಯಾಯದಾನ ಪ್ರಕ್ರಿಯೆ ವೇಗ ಪಡೆಯಲು ರಚನಾತ್ಮಕ ಚರ್ಚೆಗಳಾಗಲಿ. ಸಲಹೆಗಳು ಬೇಗ ಕ್ರಿಯಾರೂಪಕ್ಕೆ ಇಳಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.