‘ಮಧುಗಿರಿ ಬೆಟ್ಟಕ್ಕೆ ಬರಲಿದೆ ಕೇಬಲ್ ಕಾರ್!’ (ಪ್ರ.ವಾ., ಮೇ 17) ಎಂಬ ಸುದ್ದಿ ಗಮನಸೆಳೆಯಿತು. ಮಧುಗಿರಿ, ನಂದಿಬೆಟ್ಟ ಮತ್ತು ಯಾದಗಿರಿ ಬೆಟ್ಟಗಳಲ್ಲಿ ಪ್ರವಾಸೋದ್ಯಮ ಇಲಾಖೆಯು ಇನ್ನೆರಡು ವರ್ಷಗಳಲ್ಲಿ ಕೇಬಲ್ ಕಾರ್ಗಳ ವ್ಯವಸ್ಥೆ ಮಾಡಲಿದ್ದು, ಇವು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂಬುದು ಸುದ್ದಿಯ ಸಾರಾಂಶ. ಇದು ಸಂತಸದ ವಿಚಾರ.
ಆದರೆ, ಈ ಸುದ್ದಿ ಓದಿದೊಡನೆ ನೆನಪಿಗೆ ಬಂದಿದ್ದು ಶಿವಗಂಗೆ ಬೆಟ್ಟ. ನೆಲಮಂಗಲ ತಾಲ್ಲೂಕಿಗೆ ಸೇರಿರುವ ಹಾಗೂ ತುಮಕೂರು ಜಿಲ್ಲೆಗೆ ಹೊಂದಿಕೊಂಡಂತಿರುವ ಶಿವಗಂಗೆ ಬೆಟ್ಟವು ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧವಾಗಿದೆ. ಇಲ್ಲಿನ ಬೆಟ್ಟ ಹತ್ತಿ, ತುತ್ತ ತುದಿ ತಲುಪಿ ನಂದಿಯನ್ನೊಂದು ಸುತ್ತು ಹಾಕಿ ಬರುವುದೇ ಅದ್ಭುತ ಅನುಭವ.
ರಜಾದಿನಗಳಲ್ಲಿ ಸಾವಿರಾರು ಜನರನ್ನು ಈ ಬೆಟ್ಟ ಆಕರ್ಷಿಸುತ್ತಿದೆ. ಮೇಲೆ ಬರುವ ಆಸೆಯಿದ್ದರೂ ಅದೆಷ್ಟೋ ಜನರಿಗೆ ಕಡಿದಾದ ಈ ಬೆಟ್ಟ ಹತ್ತಲು ಸಾಧ್ಯವಾಗುವುದಿಲ್ಲ. ಆದಕಾರಣ ಶಿವಗಂಗೆ ಬೆಟ್ಟಕ್ಕೂ ‘ಕೇಬಲ್ ಕಾರ್’ ವ್ಯವಸ್ಥೆ ಮಾಡುವುದು ಅವಶ್ಯಕ. ಇದರಿಂದ ಎಲ್ಲ ವಯೋಮಾನದವರಿಗೂ ಶಿವಗಂಗೆ ಬೆಟ್ಟದ ತುದಿಯಲ್ಲಿ ನಿಂತು ಪ್ರಕೃತಿಯನ್ನು ಆಸ್ವಾದಿಸಲು ಸಾಧ್ಯವಾದೀತು.
-ಆರ್.ಎಸ್. ಅಯ್ಯರ್, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.