ಕನ್ನಡ ಭಾಷೆಯ ಬಳಕೆ, ಉಳಿಕೆ ಮತ್ತು ಬೆಳವಣಿಗೆಯ ಧ್ಯೇಯಕ್ಕಾಗಿ ಇರುವ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸ್ಥಾನಗಳಿಗಾಗಿ ನಡೆಯುವ ಚುನಾವಣೆಗೆ ಪ್ರಚಾರ ಕಾರ್ಯ ಜೋರಾಗಿಯೇ ಸಾಗಿದೆ.
ರಾಜಕಾರಣಿಗಳ ಯಾವ ಪ್ರಚಾರ ತಂತ್ರಕ್ಕೂ ಕಡಿಮೆ ಇಲ್ಲದಂತೆ ಸಾಗಿರುವ ಮತದಾರರ ಓಲೈಕೆಯಲ್ಲಿ ಪರಸ್ಪರ ದೋಷಾರೋಪ, ಕೆಸರೆರಚಾಟ, ಇನ್ನಿಲ್ಲದ ಆಮಿಷಗಳು, ಕೆಲವೆಡೆ ವಿಶೇಷ ಭೋಜನ ಕೂಟ ಇತ್ಯಾದಿ ಏರ್ಪಾಡಾಗುತ್ತಿವೆ.
ಪರಿಷತ್ತಿನ ಸದಸ್ಯರೇ ಮತದಾರರಾಗಿರುವುದರಿಂದ ಮತ್ತು ಅಭ್ಯರ್ಥಿಗಳು ಸಾಹಿತ್ಯಪ್ರಿಯರು ಅಥವಾ ಸಾಹಿತಿಗಳೇ ಆಗಿರುವುದರಿಂದ ವಾಮಮಾರ್ಗಗಳ ಮೂಲಕ ಪ್ರಚಾರಕ್ಕಿಳಿಯುವುದು ಶೋಭೆ ತಾರದು. ಇತರ ಚುನಾವಣೆಗಳಂತೆ ಹಣದ ಆಮಿಷದ ಲಾಬಿ ನಡೆಯುವುದು ನಾಚಿಕೆಗೇಡಿನ ಸಂಗತಿ.
ಹಾಗೇನಾದರೂ ಆದರೆ ಬಸವಣ್ಣನವರ ‘ಏರಿ ನೀರುಂಬೊಡೆ/ ನಾರಿಯೇ ತನ್ನ ಮನೆಯೊಳು ಕಳುವೊಡೆ/ ತಾಯ ಹಾಲು ನಂಜಾಗಿ ಕೊಲುವೊಡೆ/ ಇನ್ನಾರಿಗೆ ದೂರುವೆನಯ್ಯ ಕೂಡಲ ಸಂಗಮದೇವಾ’ ಎಂಬಂತಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಮತ್ತು ಮತದಾರರೆಲ್ಲರೂ ಪಾರದರ್ಶಕತೆ, ಪ್ರಾಮಾಣಿಕತೆ ಮೂಲಕ ಪರಿಷತ್ತಿನ ಘನತೆ ಕಾಯ್ದುಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.