ಕನಕದಾಸರ ಕರ್ಮಭೂಮಿ ಕಾಗಿನೆಲೆಗೆ ಇತ್ತೀಚೆಗೆ ಅಡಿವೆಪ್ಪ ಕುರಿಯವರ ಜೊತೆ ಭೇಟಿ ನೀಡಿದ್ದೆ. ಕರ್ನಾಟಕ ಸರ್ಕಾರವು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಕೋಟಿಗಟ್ಟಲೆ ಅನುದಾನವನ್ನು ನೀಡಿ ಕನಕದಾಸರ ಜೀವನ ವೃತ್ತಾಂತವನ್ನು ತಿಳಿಸುವ ಹಲವು ಮೂರ್ತಿಗಳನ್ನು, ಶಿಲ್ಪ ಕಲಾವಿದರಿಂದ ಮಾಡಿಸಿ ಉದ್ಯಾನದಲ್ಲಿ ಪ್ರತಿಷ್ಠಾಪಿಸಿದೆ. ಇದು ಸಂತಸದ ಸಂಗತಿ.
ಅಲ್ಲಿರುವ ಮೂರ್ತಿಶಿಲ್ಪಗಳನ್ನು ನೋಡುತ್ತಾ ಹೋದಂತೆ ಕನಕರ ಬದುಕಿನ ಮಜಲುಗಳು, ಕರ್ತೃತ್ವ ಶಕ್ತಿಯೂ ಅನಾವರಣವಾಗುತ್ತದೆ. ಜೊತೆಗೆ ಇಲ್ಲಿರುವ ಚಿಟ್ಟೆ ಉದ್ಯಾನ, ಗುಲಾಬಿ ಹೂಗಳ ಚೆಲುವು ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಪ್ರವಾಸಿಗರು ಸಂತಸದ ಹೊನಲಿನಲ್ಲಿ ನಲಿಯುವಂತೆ ಮಾಡುತ್ತವೆ.
ಇಂತಹ ಸುಂದರ ದೃಶ್ಯಗಳನ್ನು ಮತ್ತು ಬದುಕಿಗೆ ಜೀವಾಮೃತ ನೀಡುವ ಸಂದೇಶಗಳನ್ನು ದೂರದಿಂದಲೇ ನೋಡಿ ಕಣ್ತುಂಬಿಸಿಕೊಳ್ಳದ ಹಲವು ಪ್ರವಾಸಿಗರ ಚೇಷ್ಟೆಗಳು ಬೇಸರ ತರಿಸಿದವು. ಸಣ್ಣ ಮಕ್ಕಳಿಗಾಗಿ ಇರುವ ಜಾರುಬಂಡಿ, ಜೋಕಾಲಿಗಳನ್ನು ಹದಿಹರೆಯದ ಯುವಕರೂ ಉಪಯೋಗಿಸುತ್ತಿದ್ದರು. ಕನಕದಾಸರ ಪ್ರತಿಮೆ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಳ್ಳುವುದು; ಜಿಂಕೆ, ಕೋಣ ಪ್ರತಿಕೃತಿಗಳ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಿ ಮನಸ್ಸಿಗೆ ಕಿರಿಕಿರಿಯಾಯಿತು.
ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿವೇಚನೆಯೇ ನಮ್ಮಲ್ಲಿ ಕಾಣೆಯಾಗುತ್ತಿದೆ. ಮಹಾತ್ಮರ ಕಾರ್ಯಕ್ಷೇತ್ರಗಳಲ್ಲಿ ಹೀಗೆ ಮನಸೋ ಇಚ್ಛೆ ವರ್ತಿಸಿ ಉಳಿದ ಪ್ರವಾಸಿಗರಿಗೆ ಮುಜುಗುರ ಉಂಟುಮಾಡುವುದು ಸರಿಯೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.