ADVERTISEMENT

ಸ್ಪರ್ಧೆಯಿಂದಲೇ ಏಳಿಗೆ

ಎಂ.ಅಬ್ದುಲ್ ರೆಹಮಾನ್ ಪಾಷ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಭಾರತೀಯ ಸ್ಪರ್ಧಾ ಆಯೋಗ ಕೊನೆಗೂ ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾ ಮತ್ತು ಟಿ.ವಿ ಕಾರ್ಯಕ್ರಮಗಳನ್ನು ಡಬ್ಬಿಂಗ್ ಮಾಡಬಹುದು ಎಂದು ಅಧಿಕೃತ ಆದೇಶವನ್ನು ಹೊರಡಿಸುವ ಮೂಲಕ ಕನ್ನಡ ಚಿತ್ರರಂಗ ಹೊಸದೊಂದು ಸವಾಲನ್ನು ಎದುರಿಸುವಂತೆ ಮಾಡಿದೆ.

ಸಿನಿಮಾದ ಉಗಮದಿಂದಲೂ, ಮೂಕಿ ಹೋಗಿ ಟಾಕಿಯಾಗಿದ್ದು, ವರ್ಣ ಬಂದಿದ್ದು, ಸಿನಿಮಾಸ್ಕೋಪ್ ಇತ್ಯಾದಿ ಹೊಸ ಫಾರ್ಮ್ಯಾಟುಗಳು ಬಂದಿದ್ದು, ಟೆಲಿವಿಷನ್ ಉಗಮ, ಸ್ಯಾಟಲೈಟ್ ಚಾನೆಲುಗಳು, ಡಿಜಿಟಲ್ ತಂತ್ರಜ್ಞಾನ ಕ್ರಾಂತಿ ಹೀಗೆ ಅನೇಕ ಸಂಕ್ರಮಣಗಳ ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಯಾವುದೇ ವಾಣಿಜ್ಯರಂಗದಲ್ಲಿ ಗ್ರಾಹಕರೇ ಧಣಿಗಳು; ಅವರ ಹಕ್ಕೇ ನಿರ್ಣಾಯಕ ಎನ್ನುವುದಕ್ಕೆ ನಾವೆಲ್ಲ ಮನ್ನಣೆ ಕೊಡಬೇಕು. ಕನ್ನಡ ಚಿತ್ರಗಳನ್ನು ಇತರ ಭಾಷೆಗಳಿಗೆ ಡಬ್ಬಿಂಗ್ ಮಾಡಿದರೆ ಪರವಾಯಿಲ್ಲ; ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆಗಬಾರದು ಎನ್ನುವ ಧೋರಣೆ ಅತಾರ್ಕಿಕವಾದದ್ದು ಮತ್ತು ಕಾನೂನುಬಾಹಿರ ಎಂಬುದು ಈಗ ದೃಢಪಟ್ಟಿದೆ.

ಇದರಿಂದ ಸಿನಿಮಾ ಕ್ಷೇತ್ರದಲ್ಲಿ ಏನು ಮಹಾ ಪ್ರಯೋಜನವಾಗುತ್ತದೋ ಗೊತ್ತಿಲ್ಲ. ಆದರೆ, ಟೆಲಿವಿಷನ್‌ನಲ್ಲಿ ಈಗಾಗಲೇ ಹಿಂದಿ, ತೆಲುಗು, ತಮಿಳಿನಲ್ಲಿ ಪ್ರಸಾರವಾಗುತ್ತಿರುವ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ ಇತ್ಯಾದಿ ವಿಜ್ಞಾನ, ತಂತ್ರಜ್ಞಾನ ಕಾರ್ಯಕ್ರಮಗಳು ಕನ್ನಡದಲ್ಲಿ ಬರುವುದಾದರೆ, ಅದರಿಂದ ಜನಪ್ರಿಯ ವಿಜ್ಞಾನದ ಪ್ರಸಾರಕ್ಕೆ ಆಗುವ ಉಪಕಾರ ಅಷ್ಟಿಷ್ಟಲ್ಲ. ಜೊತೆಗೆ, ಸಿನಿಮಾ, ಸೀರಿಯಲ್‌ಗಳಲ್ಲಿಯೇ ಸಮಯ ಹಾಳು ಮಾಡುವುದಕ್ಕಿಂತ ಅದೇ ಟೆಲಿವಿಷನ್‌ನಲ್ಲಿ ಬರುವ ಮಾಹಿತಿ, ವ್ಯಕ್ತಿವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ವೀಕ್ಷಿಸುವ ಸಹೃದಯತೆಯನ್ನು ಬೆಳೆಸುವುದೂ ಇಂದಿನ ತುರ್ತು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.