ಕಲಬುರ್ಗಿಯ ಕಾರ್ಯಕ್ರಮವೊಂದರಲ್ಲಿ ಉನ್ನತ ಶಿಕ್ಷಣ ಸಚಿವರು, ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರ ಹುದ್ದೆಗಳನ್ನು ಮೌಖಿಕ ಸಂದರ್ಶನವಿಲ್ಲದೆ ಆನ್ಲೈನ್ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ತುಂಬುವುದಾಗಿ ಹೇಳಿರುವುದು ಸ್ವಾಗತಾರ್ಹ ನಡೆ.
ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕ ಹುದ್ದೆಗಳಂತಹ ಉನ್ನತ ಹುದ್ದೆಗಳನ್ನು ಪಡೆಯಲು ಬರೀ ಅರ್ಹತೆ ಇದ್ದರೆ ಸಾಲದು. ಅದರೊಂದಿಗೆ ಹಣ, ಅಧಿಕಾರದ ಬಲವೂ ಇರಬೇಕೆಂಬ ಸ್ಥಿತಿ ಇದೆ. ಪ್ರತಿಭೆಗಿಂತ ಕಾಂಚಾಣ ಮತ್ತು ರಾಜಕೀಯದವರ ಕೃಪಾಕಟಾಕ್ಷವೇ ಮುಖ್ಯ ಎಂಬಂತಾಗಿದೆ.
ಸಚಿವರ ಈ ನಿರ್ಧಾರ ಜಾರಿಗೆ ಬಂದರೆ, ಮುಂದೊಂದು ದಿನ ಯಾವುದಾದರೂ ಒಂದು ವಿಶ್ವವಿದ್ಯಾಲಯದಲ್ಲಿ ಸ್ವಸಾಮರ್ಥ್ಯದಿಂದ ಹುದ್ದೆ ಪಡೆಯಬಹುದೆಂಬ ಭರವಸೆಯ ಕಿರಣವೊಂದು ಆಕಾಂಕ್ಷಿಗಳಲ್ಲಿ ಮೂಡಬಹುದು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತುಂಬುವ ದಿಟ್ಟ ನಿರ್ಧಾರವನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ. ವಿ.ವಿ.ಗಳ ನೇಮಕಾತಿಯಲ್ಲೂ ಪಾರದರ್ಶಕತೆ ತಂದರೆ ಅದು ಉನ್ನತ ಶಿಕ್ಷಣದಲ್ಲಿ ತಂದ ಕ್ರಾಂತಿಕಾರಿ ಬದಲಾವಣೆಯಾಗುತ್ತದೆ.
–ಆನಂದ ಎನ್.ಎಲ್., ಚಿಕ್ಕಬಳ್ಳಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.