ರಾಜ್ಯದ ಅನೇಕ ವಿದ್ಯಾರ್ಥಿ ನಿಲಯಗಳಲ್ಲಿ ಅಧಿಕೃತವಾಗಿ ದಾಖಲಾದ ವಿದ್ಯಾರ್ಥಿಗಳಿಗಿಂತ ಅನಧಿಕೃತ ವಿದ್ಯಾರ್ಥಿಗಳೇ ಹೆಚ್ಚಾಗಿ ತುಂಬಿಕೊಂಡಿದ್ದಾರೆ. ಇದರಿಂದ ನಿಲಯದ ವಿದ್ಯಾರ್ಥಿಗಳು ಇಲ್ಲಸಲ್ಲದ ಕಿರಿಕಿರಿಗೆ ಒಳಗಾಗಬೇಕಿದೆ. ಸೌಲಭ್ಯಗಳೂ ಏರುಪೇರು ಆಗುತ್ತಿವೆ. ಅನಧಿಕೃತವಾಗಿ ಬಂದು ಸೇರಿಕೊಂಡಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಸಮಾಜ ಕಲ್ಯಾಣ ಸಚಿವರು ಹೇಳಿದ್ದುದು ನೆನಪು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ.
ಅನಧಿಕೃತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ನಿಲಯಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿ ಪರಿವರ್ತನೆ ಆಗುತ್ತಿವೆ. ನಿಲಯ ಮೇಲ್ವಿಚಾರಕರು ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಗಾಗ್ಗೆ ಭೇಟಿ ನೀಡಬೇಕಾಗಿದ್ದ ಅಧಿಕಾರಿಗಳು ಕರ್ತವ್ಯಪ್ರಜ್ಞೆ ಮರೆತು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ನಿಯಮದ ಪ್ರಕಾರ ತಿಂಗಳಿಗೆ ಒಮ್ಮೆಯಾದರೂ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಸ್ಟೆಲ್ಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಆದರೆ ಈ ಕಾರ್ಯವೂ ನಡೆಯುತ್ತಿಲ್ಲ. ಸ್ಥಳೀಯ ಶಾಸಕರೇ ಸಾಮಾನ್ಯವಾಗಿ ತಾಲ್ಲೂಕು ಕೇಂದ್ರಗಳಲ್ಲಿನ ವಸತಿ ನಿಲಯಗಳ ಅಧ್ಯಕ್ಷರಾಗಿರುತ್ತಾರೆ. ಶಾಸಕರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳು ಸೌಜನ್ಯಕ್ಕಾದರೂ ನಿಲಯಗಳಿಗೆ ಭೇಟಿ ನೀಡಿದ್ದರೆ ಈ ದುಃಸ್ಥಿತಿ ಇರುತ್ತಿರಲಿಲ್ಲ. ಮಂಡ್ಯ ಜಿಲ್ಲೆಯಲ್ಲಿ ವಸತಿ ನಿಲಯಗಳಲ್ಲಿ ಹೇಳತೀರದ ಸಮಸ್ಯೆಗಳಿವೆ. ಜನಪ್ರತಿನಿಧಿಗಳು ಈಗಲಾದರೂ ಇತ್ತ ಗಮನಹರಿಸುವರೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.