ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಂಡು ಅನುಷ್ಠಾನಗೊಳಿಸುವುದರಿಂದ ಮುಂದೆ ಸಂಭವಿಸಬಹುದಾದ ಅನೇಕ ಅನಾಹುತಗಳನ್ನು ತಪ್ಪಿಸಬಹುದು. ನಮ್ಮ ಬ್ಯಾಂಕ್ಗಳು ತಮ್ಮ ಎ.ಟಿ.ಎಂ.ಗಳ ಬಗ್ಗೆ ಇಂದು ತಳೆದಿರುವ ನಿಲುವನ್ನು ಕಂಡು ಈ ಮಾತು ಹೇಳಬೇಕಾಗಿದೆ.
ಹಣದ ವಹಿವಾಟು ಸುಲಭವಾಗಲಿ ಎಂಬ ಉದ್ದೇಶದಿಂದ ಬ್ಯಾಂಕ್ಗಳು ಎ.ಟಿ.ಎಂ.ಗಳನ್ನು ಸ್ಥಾಪಿಸಿದ್ದವು. ಆದರೆ ಅವುಗಳ ಉಸ್ತುವಾರಿಯನ್ನು ತಾವೇ ನೋಡಿಕೊಳ್ಳದೆ, ಖಾಸಗಿ ಕಂಪೆನಿಗಳಿಗೆ ವಹಿಸಿದವು.
ಲಾಭವಿಲ್ಲದ ವ್ಯಾಪಾರವನ್ನು ಯಾರೂ ಮಾಡುವುದಿಲ್ಲ ಎಂಬ ಮಾತು ಸರಿಯಷ್ಟೆ. ಇದಕ್ಕನುಗುಣವಾಗಿ ಖಾಸಗಿ ಕಂಪೆನಿಗಳು ತಮ್ಮ ಬೇಡಿಕೆಗಳನ್ನು ಏರಿಸುತ್ತಾ ಹೋದವು ಮತ್ತು ಬ್ಯಾಂಕಿನವರು ಅವುಗಳನ್ನು ಈಡೇರಿಸುತ್ತಾ ಹೋದರು.
ಇದು ಒಂದು ರೀತಿಯಲ್ಲಿ ‘ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ’ ಆಯಿತು! ಈಗ, ಹೆಚ್ಚುತ್ತಿರುವ ಖಾಸಗಿ ಕಂಪೆನಿಗಳ ಬೇಡಿಕೆಗಳನ್ನು ಈಡೇರಿಸಲಾಗದೆ ಬ್ಯಾಂಕ್ಗಳು ಮುಗ್ಗರಿಸುವಂತಾಗಿದೆ. ಈ ಕಾರಣದಿಂದಲೇ, ಅರ್ಧಕ್ಕರ್ಧದಷ್ಟು ಎ.ಟಿ.ಎಂ.ಗಳನ್ನು ಮುಚ್ಚುವ ಯೋಚನೆಯನ್ನು ಬ್ಯಾಂಕುಗಳು ಮಾಡುತ್ತಿವೆ.
ಎ.ಟಿ.ಎಂ. ಯಂತ್ರಗಳ ತಂತ್ರಜ್ಞಾನದಲ್ಲಿ ಆಗಿರುವ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುವಂತೆ ಎ.ಟಿ.ಎಂ. ತಂತ್ರಜ್ಞಾನ ಪೂರೈಸುವ ಕಂಪೆನಿಗಳು ಬ್ಯಾಂಕುಗಳಿಗೆ ಮುನ್ನೆಚ್ಚರಿಕೆ ನೀಡುತ್ತ ಬಂದಿದ್ದರೂ, ಬ್ಯಾಂಕ್ಗಳಾಗಲಿ, ಎ.ಟಿ.ಎಂ. ಉಸ್ತುವಾರಿ ವಹಿಸಿದ ಖಾಸಗಿ ಕಂಪೆನಿಗಳಾಗಲಿ ಗಮನಹರಿಸಿಲ್ಲ. ಈಗ ಮಿತಿಯಿಲ್ಲದ ಬೇಡಿಕೆ ಮತ್ತು ಎ.ಟಿ.ಎಂ. ಯಂತ್ರಗಳ ನಿರ್ವಹಣೆ- ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಂತಾಗಿದೆ. ಅದಕ್ಕೆ ಕೆಲವು ಎ.ಟಿ.ಎಂ.ಗಳನ್ನು ಮುಚ್ಚಿ ಹಣ ಉಳಿಸುವ ಚಿಂತನೆ ನಡೆಸಿವೆ.
ಇಲ್ಲೊಂದು ಪ್ರಶ್ನೆ ಏಳುತ್ತದೆ. ಬ್ಯಾಂಕ್ಗಳು ಇರುವುದು ಸಾರ್ವಜನಿಕರ ಸೇವೆಗಾಗಿಯೋ ಅಥವಾ ಹೆಚ್ಚು ಹೆಚ್ಚು ಲಾಭ ಗಳಿಸುವುದಕ್ಕಾಗಿಯೋ?
-ಉಡುಪಿ ಅನಂತೇಶ ರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.