ಹತ್ಯಾ ರಾಜಕಾರಣದ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿಗಳನ್ನು ನಿಷೇಧಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಧ್ವನಿ ಎತ್ತಿದ್ದಾರೆ. ಈ ಧ್ವನಿಗೆ ಮುಖ್ಯಮಂತ್ರಿಗಳು ಸಾಥ್ ನೀಡಿದ್ದಾರೆ (ಪ್ರ.ವಾ., ಜ. 11). ಈ ಹೇಳಿಕೆಗಳಿಗೆ ಒಂದು ವೇಳೆ ಒಪ್ಪಿದರೂ, ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಉಗ್ರಗಾಮಿ’ ಪಕ್ಷವಾದ ಬಿಜೆಪಿಗೆ ದೇಶವನ್ನಾಳುವ ಅಧಿಕಾರ ಕೊಡಲಾಗಿದೆ.
ಇಂದಿನ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಜೊತೆಗೆ ಅನೇಕ ಲೋಕಸಭಾ ಸದಸ್ಯರು ಮತ್ತು ವಿಧಾನಸಭಾ ಸದಸ್ಯರು ಇದೇ ಆರ್ಎಸ್ಎಸ್ ಸಂಘಟನೆಯಿಂದ ಬಂದಿದ್ದು, ಸಂಘಟನೆಗೆ ಅಪಕೀರ್ತಿ ಬಾರದಂತೆ ತಮ್ಮ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಘಟನೆಯು ರಾಷ್ಟ್ರ ನಿರ್ಮಾಪಕರನ್ನು ನೀಡಿರುವುದನ್ನು ಕಂಡೂ ಇದನ್ನು ಉಗ್ರಗಾಮಿ ಸಂಘಟನೆ ಎಂದು ದೂರುವುದು ರಾಜ್ಯವನ್ನಾಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸರಿಯೇ?
ಇವು ಉಗ್ರಗಾಮಿ ಸಂಘಟನೆಗಳೆಂದು ಕಾಂಗ್ರೆಸ್ ಪಕ್ಷ ಅಭಿಪ್ರಾಯಪಟ್ಟರೆ ಇವುಗಳನ್ನು ಕಾನೂನಿನ ಮೂಲಕ ವಿರೋಧಿಸಬೇಕೆ ವಿನಾ ಇಲ್ಲಸಲ್ಲದ ಪತ್ರಿಕಾ ಹೇಳಿಕೆಗಳ ಮೂಲಕ ಖಂಡಿತ ಅಲ್ಲ. ಈಗಿನ ರಾಜಕಾರಣಿಗಳ (ಎಲ್ಲಾ ಪಕ್ಷಗಳ) ಬಗ್ಗೆ ಜನಸಾಮಾನ್ಯರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ರಾಜ್ಯದ ಎಲ್ಲಾ ಪಕ್ಷಗಳ ರಾಜಕಾರಣಿಗಳು ಪ್ರತಿದಿನ ಕೆಸರಿನಾಟ ಆಡದೆ ರಚನಾತ್ಮಕವಾಗಿ ಆಡಳಿತ ನಡೆಸಬೇಕು ಮತ್ತು ವಿರೋಧದ ಹಿಂದೆಯೂ ರಚನಾತ್ಮಕ ರಾಜಕಾರಣ ಇರಬೇಕು.
ಈ ನಾಯಕರು ತಮ್ಮ ತಮ್ಮ ಕೆಲಸಗಳಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತಿ... ಇವನ್ನು ಮೀರಬೇಕು. ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಬೇಕು. ಜನರು ಕೂಡ ಇಂತಹ ರಚನಾತ್ಮಕ ರಾಜಕಾರಣವನ್ನೇ ಬೆಂಬಲಿಸಬೇಕು. ರಾಜಕಾರಣಿಗಳು ರಾಜ್ಯದ ಅಭಿವೃದ್ಧಿ
ಯತ್ತ ಗಮನಹರಿಸಿದರೆ ಈ ಯುಗಾದಿ ನಂತರವಾದರೂ ಒಳ್ಳೆಯದಾಗಬಹುದೆಂಬುದು ನಿರೀಕ್ಷೆ.
ಎ.ವಿ. ಶಾಮರಾವ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.