ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ದಿನ (ಫೆ. 5) ಬೆಳಿಗ್ಗೆ ವಿಧಾನಸಭೆಯಲ್ಲಿ ಹಾಜರಿದ್ದ ಶಾಸಕರ ಸಂಖ್ಯೆ 36. ಶುಕ್ರವಾರ (ಫೆ. 9) ಬೆಳಿಗ್ಗೆ ಕಲಾಪ ಆರಂಭವಾಗಬೇಕಿದ್ದ ಸಮಯದಲ್ಲಿ ಕೇವಲ 11 ಶಾಸಕರು ವಿಧಾನಸಭೆಯಲ್ಲಿದ್ದರು. ಕೋರಂ ಅಭಾವದಿಂದ ಕಲಾಪವನ್ನು ಮುಂದೂಡಬೇಕಾಗಿ ಬಂದಿತ್ತು ಎಂದು ವರದಿಯಾಗಿದೆ. ಇದು ಅತ್ಯಂತ ಬೇಸರದ ವಿಚಾರ. ಜತೆಗೆ ನಮ್ಮ ಶಾಸಕರು ವಿಧಾನಸಭಾ ಕಲಾಪವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಸಾಕ್ಷಿ.
ಈ ಸ್ಥಿತಿಗೆ ಹೊಣೆ ಯಾರು? ವೋಟು ಹಾಕಿ ಆರಿಸಿ ಕಳಿಸಿದ ಮತದಾರರೋ ಅಥವಾ ಆಯ್ಕೆಯಾದ ಶಾಸಕರೋ? ಇಬ್ಬರೂ ಸಮಾನ ಹೊಣೆಗಾರರು. ಇಂಥ ರಾಜಕಾರಣಿಗಳೇ ಚುನಾವಣಾ ಸಂದರ್ಭದಲ್ಲಿ, ‘ಎಲ್ಲರೂ ಕಡ್ಡಾಯವಾಗಿ ಮತ ಚಲಾವಣೆ ಮಾಡಿ’ ಎಂದು ದುಂಬಾಲು ಬೀಳುತ್ತಾರೆ. ನಮ್ಮ ಜವಾಬ್ದಾರಿಯನ್ನು ನೆನಪಿಸಿಕೊಡುವ ರಾಜಕಾರಣಿಗಳಿಗೆ ಅವರ ಹೊಣೆಗಾರಿಕೆ ಯಾಕೆ ನೆನಪಿನಲ್ಲಿರುವುದಿಲ್ಲ?
ಈ ಬಾರಿ ಶಾಸಕರು ಮತ ಕೇಳಲು ಮನೆಬಾಗಿಲಿಗೆ ಬಂದಾಗ, ಕಲಾಪದಲ್ಲಿ ಅವರ ಹಾಜರಾತಿ ಎಷ್ಟಿತ್ತು ಮತ್ತು ಜನರ ಸಮಸ್ಯೆಗಳ ಬಗ್ಗೆ ಎಷ್ಟು ಬಾರಿ ಚರ್ಚೆ ನಡೆಸಿದ್ದರು ಎಂಬುದನ್ನು ಕೇಳಲು ಮತದಾರರು ಮರೆಯಬಾರದು. ಜತೆಗೆ ಪ್ರಜೆಗಳಾದ ನಾವು ನಮ್ಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು.
–ಜಿ.ಸಿ. ಬಸವಲಿಂಗಪ್ಪ, ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.